ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಕಾಂಗ್ರೆಸ್ ಸರಕಾರದ ನಿರ್ಲಕ್ಷದಿಂದ ರಾಜ್ಯದಲ್ಲಿ ಬಾಣಂತಿಯರು, ಶಿಶಿಗಳು ಸಾವನ್ನಪ್ಪುತ್ತಿವೆ. ಆದರೆ, ಸದನದಲ್ಲಿ ಈ ಕುರಿತು ಚರ್ಚೆಯಾಗಲಿಲ್ಲ ಎಂದು ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಮಹಿಳಾ ಮೋರ್ಚಾ ಆರೋಪಿಸಿದೆ.
ಈ ಬಗ್ಗೆ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಹಿಳಾ ಮೋರ್ಚಾ ಗದಗ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ಹೇಳಿಕೆ ನೀಡಿ ಮಾತನಾಡಿ, ರಾಜ್ಯದಲ್ಲಿ ಸರಣಿಯಂತೆ ಬಾಣಂತಿ, ಶಿಶುಗಳು ಮೃತಪಟ್ಟರೂ ಅಧಿಕಾರಿಗಳು ಮತ್ತು ಸಚಿವರು ನಿರ್ಲಕ್ಷ ವಹಿಸಿದ್ದಾರೆ. ದುರಹಂಕಾರದಿಂದ ನಡೆದುಕೊಳ್ಳುತ್ತಿರುವ ಸರಕಾರಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ತಾಯಂದಿರ ಕಣ್ಣೀರು ಒರೆಸುವ ಕೆಲಸವಾಗಬೇಕಿದೆ. ಹಲವು ಹಗರಣಗಳಲ್ಲಿ ಭಾಗಿಯಾದ ಸಿದ್ಧರಾಮಯ್ಯ ಅವರಿಗೆ ಪ್ರಜಾಪ್ರಭುತ್ವದ ಬಗ್ಗೆ ನಿಜವಾಗಿಯೂ ಗೌರವವಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಜಾನುವಾರುಗಳಿಗೆ ನೀಡಬೇಕಾದ ಔಷಧವನ್ನು ಮನುಷ್ಯರಿಗೆ ನೀಡಲಾಗುತ್ತಿದೆ. ಸರಕಾರದ ತಪ್ಪನ್ನು ವೈದ್ಯರು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಸಚಿವರು ಒಪ್ಪಿಕೊಳ್ಳುತ್ತಿಲ್ಲ. ಎಲ್ಲಿಯವರೆಗೆ ಈ ಸರಕಾರ ಅಧಿಕಾರದಲ್ಲಿ ಇರುತ್ತದೆಯೋ, ಅಲ್ಲಿಯವರೆಗೆ ಬಾಣಂತಿಯರು ಸುರಕ್ಷಿತವಲ್ಲ. ಬಾಣಂತಿಯರ ಸಾವು ಪ್ರಕರಣದಲ್ಲಿ ವಜಾಗೊಳಿಸಬೇಕಿರುವುದು ಆರೋಗ್ಯ ಸಚಿವರನ್ನೇ ಹೊರತು ವೈದ್ಯಾಧಿಕಾರಿಗಳನ್ನಲ್ಲ.
ಈ ಸಂದರ್ಭದಲ್ಲಿ ಪಕ್ಷದ ಹಿರಿಯರಾದ ಎಂ.ಎಸ್. ಕರಿಗೌಡ್ರ, ಪ್ರಮುಖರಾದ ಅನಿಲ ಅಬ್ಬಿಗೇರಿ, ಅಶ್ವಿನಿ ಜಗತಾಪ್, ವಂದನಾ ವರ್ಣೇಕರ್, ಅಶ್ವಿನಿ ಅಂಕಲಕೋಟಿ, ಕಮಲಾಕ್ಷೀ ಗೊಂದಿ, ಪಾರ್ವತಿ ಪಟ್ಟಣಶೆಟ್ಟಿ, ಜಯಶ್ರೀ ಅಣ್ಣಿಗೇರಿ, ವಿಜಯಲಕ್ಷ್ಮಿ ಮಾನ್ವಿ, ಕವಿತಾ ಬಂಗಾರಿ, ಸ್ವಾತಿ ಅಕ್ಕಿ, ಪದ್ಮಿನಿ ಮುತ್ತಲದಿನ್ನಿ, ಶೇಖವ್ವ ಮಾಸರಡ್ಡಿ, ಸುಮಂಗಲಾ ಕೊನೆವಾಲ ಸೇರಿದಂತೆ ಮಹಿಳಾ ಪ್ರಮುಖರು ಉಪಸ್ಥಿತರಿದ್ದರು.
ಬಾಣಂತಿ, ಶಿಶುಗಳ ಸಾವು ಖಂಡನೀಯ ಇದು ಸರಕಾರವೇ ಮಾಡಿರುವ ಹತ್ಯೆ ಎಂದು ತೋಟಪ್ಪ(ರಾಜು) ಕುರುಡಗಿ ಆರೋಪಿಸಿದರಲ್ಲದೆ, ಆಸ್ಪತ್ರೆಗಳಿಗೆ ಅವಧಿ ಮೀರಿದ ಔಷಧಗಳನ್ನು ಪೂರೈಸಿದ್ದಾರೆ. ಹೆಚ್ಚಿನ ಲಾಭದ ಆಸೆಗಾಗಿ ದಿನೇಶ ಗುಂಡೂರಾವ್ ಅವರು ಒಂದೇ ಏಜೆನ್ಸಿಗೆ ಗುತ್ತಿಗೆ ನೀಡಿದ್ದರಿಂದ ಅವಾಂತರ ಸೃಷ್ಟಿಯಾಗಿದೆ. ಔಷಧ ಪೂರೈಕೆಯಲ್ಲಿ ಪಾರದರ್ಶಕತೆ ಬೇಕು ಎಂದರು.