ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನಮಠದ ಲಿಂಗೈಕ್ಯ ಹಿರಿಯ ಅನ್ನದಾನ ಸ್ವಾಮಿಗಳ 112ನೇ ಪುಣ್ಯಸ್ಮರಣೋತ್ಸವ, ಲಿಂಗೈಕ್ಯ ಅಭಿನವ ಅನ್ನದಾನ ಸ್ವಾಮಿಗಳ ತೃತೀಯ ಪುಣ್ಯಸ್ಮರಣೋತ್ಸವ ಹಾಗೂ 174ನೇ ಅನ್ನದಾನೇಶ್ವರ ಮಹಾರಥೋತ್ಸವದ ಕಾರ್ಯಕ್ರಮಗಳು ಜ. 2, 3ರಂದು ನಡೆಯಲಿವೆ.
ಜ. 2ರಂದು ಮಧ್ಯಾಹ್ನ 12ಕ್ಕೆ ಮಹಾಗಣಾರಾಧನೆ ನಡೆಯಲಿದೆ. ಸಂಜೆ 6.30ಕ್ಕೆ ನಡೆಯುವ ಸ್ವಾಮೀಜಿಗಳ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯವನ್ನು ಒಳಬಳ್ಳಾರಿಯ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ನಂದವಾಡಗಿ-ಆಳAದದ ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು, ಚಳಗೇರಿಯ ವೀರಸಂಗಮೇಶ್ವರ ಶಿವಾಚಾರ್ಯರು, ದರೂರು ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮೀಜಿ, ಶ್ರೀಧರಗಡ್ಡೆ ಮರಿಕೊಟ್ಟೂರು ದೇಶಿಕರು, ಸೋಮಸಮುದ್ರದ ಸಿದ್ದಲಿಂಗ ದೇಶಿಕರು, ಬೂದಗುಂಪದ ಸಿದ್ಧೇಶ್ವರ ದೇಶಿಕರು, ಸಂಗನಹಾಲದ ವಿಶ್ವೇಶ್ವರ ದೇವರು ಪಾಲ್ಗೊಳ್ಳಲಿದ್ದಾರೆ. ಬಾಲಕೋಟೆಯ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಜಿ.ಜಿ. ಹಿರೇಮಠ ಉಪನ್ಯಾಸ ನೀಡಲಿದ್ದಾರೆ.
ಜ. 3ರಂದು ಬೆಳಿಗ್ಗೆ 5ರಿಂದ 7ರವರೆಗೆ ಸ್ವಾಮೀಜಿಯವರ ಗದ್ದುಗೆಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಂಗಳಾರತಿ ಜರುಗಲಿದೆ. ಬೆಳಿಗ್ಗೆ 10ಕ್ಕೆ ನಾಗಲಾಪುರ-ಕುರುಗೋಡಿನ ಮಠದ ನಿರಂಜನಪ್ರಭು ಸ್ವಾಮಿಗಳ ಒಪ್ಪತ್ತೇಶ್ವರಸ್ವಾಮಿ ಸಮ್ಮುಖದಲ್ಲಿ ಜಂಗಮೋತ್ಸವ ನಡೆಯಲಿದೆ. ಸಂಜೆ 5ಕ್ಕೆ ಜರುಗುವ 174ನೇ ಅನ್ನದಾನೇಶ್ವರ ಮಹಾರಥೋತ್ಸವದಲ್ಲಿ ಇಟಗಿ ಗ್ರಾಮಸ್ಥರು ಕಲಾತ್ಮಕವಾದ ಡಮಣಿ ಗಾಡಿಯಲ್ಲಿ ತೇರಿನ ಹಗ್ಗವನ್ನು ತರುವರು.
ಹೊಸಳ್ಳಿಯ ಗ್ರಾಮಸ್ಥರು ನಂದಿಕೋಲು ಸೇವೆ ಸಲ್ಲಿಸಲಿದ್ದಾರೆ. ಸಂಜೆ 6ಕ್ಕೆ ಅನ್ನದಾನೇಶ್ವರ ಕಾರ್ತಿಕೋತ್ಸವ ನಡೆಯಲಿದೆ. ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಶಿವಾನುಭವಗೋಷ್ಠಿ ಹಾಗೂ ಹಾಲಕೆರೆ ಐಸಿರಿ ಗ್ರಂಥ ಬಿಡುಗಡೆ ನಡೆಯಲಿದೆ. ಉತ್ತಂಗಿ-ಕೊಟ್ಟೂರು ಕೊಟ್ಟೂರೇಶ್ವರ ಮಠದ ಸೋಮಶೇಖರ ಸ್ವಾಮೀಜಿ, ಕೊಟ್ಟೂರಿನ ಡೋನೂರು ಜಾನಕೋಟಿಮಠದ ಸಿದ್ದಲಿಂಗ ಶಿವಾಚಾರ್ಯರು, ತೆಲಂಗಾಣ ನೇರಡಗಂಬದ ಪಶ್ಚಿಮಾದ್ರಿ ಮಠದ ಸಿದ್ದಲಿಂಗ ಸ್ವಾಮೀಜಿ, ಖೇಳಗಿಯ ಶಿವಲಿಂಗೇಶ್ವರ ಸಂಸ್ಥಾನ ಮಠದ ಶಿವಲಿಂಗ ಸ್ವಾಮೀಜಿ, ಜಿಗೇರಿಯ ಗುರುಸಿದ್ದ ಶಿವಾಚಾರ್ಯರು, ಗುಳೇದಗುಡ್ಡದ ಮರಡಿಮಠದ ಕಾಡಸಿದ್ದೇಶ್ವರ ಶಿವಾಚಾರ್ಯರು, ಹೊಸಪೇಟೆಯ ಕೆಂಪಿನಸ್ವಾಮಿಮಠದ ಸಿದ್ದಲಿಂಗ ದೇವರು, ಹಳಿಂಗಳಿಯ ಶರಣಬಸವ ದೇವರು ಪಾಲ್ಗೊಳ್ಳಲಿದ್ದಾರೆ.
ರೋಣ ಶಾಸಕ ಜಿ.ಎಸ್. ಪಾಟೀಲ, ಮಾಜಿ ಶಾಸಕ ಕಳಕಪ್ಪ ಬಂಡಿ ಭಾಗವಹಿಸಲಿದ್ದಾರೆ ಎಂದು ಶ್ರೀಮಠದಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.



