ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಶಿಕ್ಷಣ ಸೇವೆಯೇ ದೇವರ ಸೇವೆ ಎಂದು ಶಿಕ್ಷಣಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ಶ್ರೇಷ್ಠ ಪುರುಷ, ತ್ಯಾಗವೀರ ಶಿರಸಂಗಿ ಲಿಂಗರಾಜರು ಶಿಗ್ಲಿಯ ಹೆಮ್ಮೆಯಾಗಿದ್ದು, ಅವರು ಎಂದೆAದಿಗೂ ಅಜರಾಮರರು ಎಂದು ಲಿಂಗರಾಜರ ವಂಶಸ್ಥರಾದ ಶಂಕ್ರಣ್ಣ ಹೇಳಿದರು.
ಅವರು ಶುಕ್ರವಾರ ಶಿರಸಂಗಿ ಲಿಂಗರಾಜರ ಜನ್ಮಭೂಮಿ ಶಿಗ್ಲಿ ಗ್ರಾಮದಲ್ಲಿ ಲಿಂಗರಾಜರ ಜನ್ಮದಿನದ ಅಂಗವಾಗಿ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ಶಿಕ್ಷಣ, ಸಮಾಜ, ಕೃಷಿ, ವ್ಯಾಪಾರ ಹೀಗೆ ಮನುಷ್ಯನ ಬದುಕಿಗೆ ಪೂರಕವಾದ ಅನೇಕ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆ ತರುವ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡ ಮಹಾನ್ ಪುರುಷರಾಗಿದ್ದಾರೆ. ಶಿಕ್ಷಣದಿಂದ ಮಾತ್ರ ಸದೃಡ ಸಮಾಜ, ಸಮೃದ್ಧ ದೇಶ ಕಟ್ಟಲು ಸಾಧ್ಯ ಎಂದು ತಮ್ಮೆಲ್ಲ ಸಂಪತ್ತನ್ನು ಶಿಕ್ಷಣ ಕ್ಷೇತ್ರಕ್ಕೆ ಧಾರೆಯೆರೆದ್ದಾರೆ ಎಂದರು.
ಈಗಲೂ ಇರುವ ಅವರ ಆಡಿ ಬೆಳೆದ ತೊಟ್ಟಿಲಿಗೆ ಮತ್ತು ಲಿಂಗರಾಜರದ ಪುತ್ಥಳಿಗೆ ಅಭಿಷೇಕ, ವಿಶೇಷ ಪೂಜೆ ಸಲ್ಲಿಸುವ ಮೂಲಕ 159ನೇ ಜನ್ಮ ದಿನಾಚರಣೆ ಆಚರಿಸಲಾಯಿತು. ಹಿರಿಯರಾದ ಸಿದ್ದಪ್ಪ ಪೂಜಾರ, ರಾಮಣ್ಣ ಲಮಾಣಿ, ಮಹಾದೇವಪ್ಪ ಬೆಳವಗಿ, ಬಸವರಾಜ ಮಡ್ಲಿ, ಚನ್ನಬಸಪ್ಪ ಅಣ್ಣಿಗೇರಿ, ಪರಮೇಶ್ವರಪ್ಪ ಸ್ವಾದಿ, ರಾಮಣ್ಣ ಹುಲಗೂರ, ಮಂಜುನಾಥ ಅಣ್ಣಿಗೇರಿ, ಮಹಾದೇವಪ್ಪ ಹುಲಗೂರ, ಮಲ್ಲೇಶಪ್ಪ ರೊಳ್ಳಿ, ಮಂಜುನಾಥ ದೇಸಾಯಿ, ಶಿವಪ್ಪ ಹುಲಗೂರ, ರಾಮಣ್ಣ ಕಲಕೋಟಿ ಸೇರಿ ಅನೇಕರಿದ್ದರು. ಗ್ರಾಮದ ಗ್ರಾಮಾಂತರ ಶಿಕ್ಷಣ ಸಂಸ್ಥೆ, ಎಸ್.ಎಸ್. ಕೂಡ್ಲಮಠ ಮತ್ತು ನವಚೇತನ ಶಾಲಾ ಮಕ್ಕಳು, ಯುವಕರು ಪಾಲ್ಗೊಂಡಿದ್ದರು.
ಹಿರಿಯರಾದ ಸೋಮಣ್ಣ ಡಾಣಗಲ್ ಮಾತನಾಡಿ, ಉತ್ತರ ಕರ್ನಾಟಕದ ಪ್ರತಿಷ್ಠಿತ ಕೆಎಲ್ಇ ಸೊಸೈಟಿಯ ಅಭಿವೃದ್ಧಿಗೆ ಮೂಲ ಕಾರಣ ಪುರುಷರೇ ಲಿಂಗರಾಜರು ಎಂಬುದು ಸ್ಪಷ್ಟ. ಲಿಂಗರಾಜರ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ. ಇಂತಹ ಮಹನೀಯರಿಗೆ ಜನ್ಮ ನೀಡಿದ ಶಿಗ್ಲಿ ಗ್ರಾಮದಲ್ಲಿ ಅವರ ಹೆಸರು ಸದಾ ಸ್ಮರಣೀಯವಾಗಿಸುವ ಕೆಲಸವಾಗಬೇಕಿದೆ ಎಂದರು.