ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನುಳಿದ ಐವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.
ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುಂಡರಗಿ ಹಾಗೂ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದ 5 ಪ್ರತ್ಯೇಕ ದರೋಡೆ, ಮನೆ ಕಳ್ಳತನ ಹಾಗೂ ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಬಸವರಾಜ ತಂದೆ ಯಲ್ಲಪ್ಪ ಮೋಡಿಕೇರ (21) ಹಾಗೂ ಶಿರಹಟ್ಟಿ ನಗರದ ಚಿರಂಜೀವಿ ತಂದೆ ದುರಗಪ್ಪ ಮೋಡಿಕೇರ (22) ಎಂಬಿಬ್ಬರನ್ನು ಬಂಧಿಸಲಾಗಿದೆ. ಇವರ ಸಂಗಡಿಗರಾದ ಇನ್ನು ಐದು ಜನ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದರು.
ತನಿಖೆ ವೇಳೆ ಈ ಇಬ್ಬರು ಆರೋಪಿಗಳು ತುಮಕೂರು, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ, ದರೋಡೆ, ವಾಹನ ಕಳ್ಳತನ ಪ್ರಕರಣದಲ್ಲಿಯೂ ಭಾಗಿಯಾಗಿರುವುದು ತಿಳಿದುಬಂದಿದೆ. ಈ ಆರೋಪಿಗಳ ಮೇಲೆ ಗದಗ ಜಿಲ್ಲೆಯ ಮೂರು ಪ್ರಕರಣ ಸಹಿತ ಒಟ್ಟ 18 ಪ್ರಕರಣಗಳು ದಾಖಲಾಗಿವೆ. ಈ ತಂಡ ಹೆದ್ದಾರಿ ಬಳಿ ಧಾಬಾ, ಒಂಟಿ ಲಾರಿಗಳು ನಿಂತಿರುವಾಗ ಚಾಲಕರ ಮೇಲೆ ದಾಳಿ ಮಾಡಿ ಹಣ ದೋಚಿ ಪರಾರಿಯಾಗುತ್ತಿದ್ದರು ಎಂದು ತಿಳಿಸಿದರು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಬೊಲೇರೊ ಪಿಕಪ್ ಗೂಡ್ಸ್ ವಾಹನ, 1500 ರೂ. ನಗದು, 7.20 ಲಕ್ಷ ರೂ ಮೌಲ್ಯದ ಬಂಗಾರದ ಆಭರಣ ವಶಪಡಿಸಿಕೊಳ್ಳಲಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸಂಕದ, ಡಿಎಸ್ಪಿ ಪ್ರಭುಗೌಡ, ಪೊಲೀಸ್ ಇನ್ಸಪೆಕ್ಟರ್ ಮಂಜುನಾಥ ಕುಸುಗಲ್, ಪಿಎಸ್ಐ ಪವಾರ, ಬಿ.ಎನ್. ಯಳವತ್ತಿ ಹಾಗೂ ಸಿಬ್ಬಂದಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
22 ಲಕ್ಷ ರೂ ಮೌಲ್ಯದ ಮೊಬೈಲ್ ವಶ
ಈಲ್ಲೆಯಲ್ಲಿ 126 ಮೊಬೈಲ್ ಕಳ್ಳತನ ಪ್ರಕರಣ ಬೇಧಿಸಿರುವ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಒಟ್ಟು 22 ಲಕ್ಷ ಮೌಲ್ಯದ 116 ಮೊಬೈಲ್ ಪತ್ತೆ ಹಚ್ಚಿ ಮಾಲೀಕರಿಗೆ ವಿತರಿಸಲಾಗಿದೆ. ಕಳುವಾದ ಮೊಬೈಲ್ ಪತ್ತೆಯಲ್ಲಿ ಗದಗ ಜಿಲ್ಲೆ ಉತ್ತಮ ಸ್ಥಾನದಲ್ಲಿದೆ ಎಂದರು.