ಕಲಬುರಗಿ:- ಜಾತಿನಿಂದನೆ ಪದ ಬಳಕೆ ಮಾಡಿದ ಆರೋಪದಡಿ ರಟಕಲ್ ಪಿಎಸ್ಐ ಗಂಗಮ್ಮ ಸಸ್ಪೆಂಡ್ ಆಗಿದ್ದಾರೆ.
ಎರಡು ಕುಟುಂಬದ ಮಧ್ಯೆ ತಲೆದೋರಿದ ಜಮೀನು ವಿವಾದ ಇತ್ಯರ್ಥಪಡಿಸುವ ಮಾತುಕತೆ ವೇಳೆ ಪರಿಶಿಷ್ಟ ಸಮುದಾಯದ ಕುರಿತು ಹಗುರವಾಗಿ ಮಾತನಾಡಿದ ಹಿನ್ನೆಲೆ ಜಿಲ್ಲೆಯ ರಟಕಲ್ ಠಾಣೆಯ ಪಿಎಸ್ಐ ಗಂಗಮ್ಮ ಅಮಾನತು ಮಾಡಲಾಗಿದೆ. ಸೇರಿ ಗ್ರಾಮದ ಅಣಬಸಪ್ಪಗೌಡ ಪಾಟೀಲ್ ಹಾಗೂ ದೊಡ್ಡಪ್ಪಗೌಡ ಕುಟುಂಬದ ಮಧ್ಯೆ ಉಂಟಾಗಿರುವ ಜಮೀನು ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಲು ಯತ್ನಿಸುತ್ತಿದ್ದರು. ಈ ವೇಳೆ ಪಿಎಸ್ಐ ಗಂಗಮ್ಮ ಉಭಯ ಕುಟುಂಬದ ಸದಸ್ಯರನ್ನು ಉದ್ದೇಶಿಸಿ ಪರಿಶಿಷ್ಟ ಸಮುದಾಯವನ್ನು ನಿಂದಿಸುವ ಪದ ಬಳಸಿದ್ದಾರೆ. ಈ ಕುರಿತು ವಿಡಿಯೋ ತುಣುಕು ವೈರಲ್ ಆಗಿತ್ತು.
ಈ ವಿಡಿಯೋ ತುಣುಕು ಗಮನಿಸಿದ ಭಾರತೀಯ ದಲಿತ ಪ್ಯಾಂಥರ್ ಮತ್ತು ದಲಿತ ಸೇನೆ ಪದಾಧಿಕಾರಿಗಳು ಚಿಂಚೋಳಿ ಡಿವೈಎಸ್ಪಿ ಹಾಗೂ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕ ಈಶಾನ್ಯ ವಲಯ ಐಜಿಪಿ ಅಜಯ್ ಹಿರೋಳಿ PSI ಗಂಗಮ್ಮ ರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.