ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಶಿಕ್ಷಣ ಸೇವೆಯೇ ದೇವರ ಸೇವೆಯಾಗಿದ್ದು, ಬಡ ಮಕ್ಕಳ ಶಿಕ್ಷಣ ಸೇವೆ ಮಾಡುವ ಕಾರ್ಯದಲ್ಲಿಯೇ ದೇವರನ್ನು ಕಂಡರೆ ಸಂತೃಪ್ತಿ ಸಾಧ್ಯವಾಗುತ್ತದೆ ಎಂದು ಲಕ್ಮೇಶ್ವರದ ಉಪನೋಂದಣಾಧಿಕಾರಿ ಎಸ್.ಕೆ. ಜಲರಡ್ಡಿ ಹೇಳಿದರು.
ಅವರು ಪಟ್ಟಣದ ದೊಡ್ಡೂರ ರಸ್ತೆ ಬದಿಯ ಗುಡಿಸಲು ವಾಸಿಗಳ ಮಕ್ಕಳಿಗೆ ಪಟ್ಟಣದ ನೀಲಪ್ಪ ಗುಡ್ಡಪ್ಪ ಶಿರಹಟ್ಟಿ ಸೇವಾ ಸಂಸ್ಥೆ ಹಾಗೂ ಅಡರಕಟ್ಟಿಯ ಶಿವಾಜಪ್ಪ ರಾಮಚಂದ್ರಪ್ಪ ಮರಾಠೆ ಬಳಗ `ಹಸಿದವರ ಅನ್ನಜೋಳಿಗೆ’ ಕಾರ್ಯಕ್ರಮದಡಿ ಕಲಿಕಾ ಸಾಮಗ್ರಿಗಳು ಮತ್ತು ಬಟ್ಟೆ ವಿತರಣಾ ಕಾರ್ಯ ನೆರವೇರಿಸಿ ಮಾತನಾಡಿದರು.
ಸರ್ಕಾರ ಇಂದು ಪ್ರಾಥಮಿಕ ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿಸಿದೆ. ಬಡತನ, ಅಜ್ಞಾನ, ಅನಕ್ಷರತೆಯ ಕಾರಣದಿಂದ ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತವಾಗಬಾರದು. ಶಿಕ್ಷಣ ಸೇವೆಗಾಗಿ ಮಠ-ಮಾನ್ಯಗಳು, ಸೇವಾ ಸಂಘಟನೆಗಳು, ಶಿಕ್ಷಣ ಪ್ರೇಮಿ-ದಾನಿಗಳುಳ್ಳ ಸಮಾಜವೂ ಸಿದ್ಧವಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿ.ಜಿ. ಹಿರೇಮಠ ಮಾತನಾಡಿ, ಬಡತನದಲ್ಲಿಯೂ ಸುನಂದಾ ಕರಿಯಪ್ಪ ಶಿರಹಟ್ಟಿ ದಂಪತಿಗಳ ಸಾಮಾಜಿಕ, ಶೈಕ್ಷಣಿಕ ಸೇವಾ ಶ್ಲಾಘನೀಯ ಎಂದರು.
ಈ ವೇಳೆ ದಾನಿಗಳಾದ ಮಂಜುನಾಥ ಕುರ್ತಕೋಟಿ, ಕರಿಯಪ್ಪ ಶಿರಹಟ್ಟಿ ದಂಪತಿಗಳು, ಡಿ.ಎನ್. ದೊಡ್ಡಮನಿ, ಫಕೀರಪ್ಪ ಭಜಕ್ಕನವರ, ಎಸ್.ಬಿ. ಲಕ್ಷ್ಮೇಶ್ವರ, ಬಸವರಾಜ ಹಿರೇಮನಿ, ಹನಮಂತಪ್ಪ ಹರಿಜನ, ಗಾಳೆಪ್ಪ ಹರಿಜನ, ಗುಡ್ಡಪ್ಪ ಮತ್ತೂರ, ಮಾರ್ತಾಂಡಪ್ಪ ಗಾಳಪ್ಪನವರ, ಮಂಜು ಹರಿಜನ, ಶಿವಾನಂದ ನಡುವಿನಮನಿ, ಬಸವರಾಜ ಮಾದರ, ದಾದಾಪೀರ ಸೊಲ್ಲಾಪುರ, ವಿನೋದ ಶಿರಹಟ್ಟಿ ಹಾಗೂ ಹಿರಿಯರು ಉಪಸ್ಥಿತರಿದ್ದರು. ಬಸವರಾಜ ಯರಗುಪ್ಪಿ, ಪರಮೇಶ್ವರ ಕಾಳಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.