ವಿಜಯಸಾಕ್ಷಿ ಸುದ್ದಿ, ಗದಗ: ಮಹಾಯೋಗಿ ವೇಮನ ಮತ್ತು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರುಗಳ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಾಗೃತ ಸಮಾಜ ನಿರ್ಮಾಣವಾಗಬೇಕು ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.
ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘ ಇವರುಗಳ ಸಹಯೋಗದಲ್ಲಿ ಜರುಗಿದ ಮಹಾಯೋಗಿ ವೇಮನರ 613ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇಮನರ ಜಯಂತಿಯನ್ನು ಕರ್ನಾಟಕ ತುಂಬೆಲ್ಲಾ ಆಚರಣೆ ಮಾಡಬೇಕು ಎಂದು ವಿಶೇಷ ಪ್ರೇರಣೆ ನೀಡಿದವರಲ್ಲಿ ಗದಗ ಜಿಲ್ಲೆಯವರ ಪಾತ್ರ ಅಪಾರವಿದೆ. ವೇಮನ ಸಾಹಿತ್ಯ ಹಾಗೂ ಅವರ ಇತಿಹಾಸ ದಕ್ಷಿಣ ಕರ್ನಾಟಕದ ಭಾಗದವರಿಗೆ ಪರಿಚಯವೇ ಇಲ್ಲದ ಸಂದರ್ಭದಲ್ಲಿ ಸಹಕಾರಿ ಭೀಷ್ಮ ಕೆ.ಎಚ್. ಪಾಟೀಲ ಸೇರಿದಂತೆ ಹಲವಾರು ಹಿರಿಯರು ಇತಿಹಾಸವನ್ನು ಹೆಕ್ಕಿ ತೆಗೆದು ವೇಮನ ಅವರ ಇತಿಹಾಸ ಸಾಹಿತ್ಯವನ್ನು ಪರಿಚಯಿಸಿ ಜನವರಿ 19ನ್ನು ವೇಮನ ಜಯಂತಿ ಆಚರಣೆ ಮಾಡಿ ಕರ್ನಾಟಕ ತುಂಬಾ ಅವರ ಸಿದ್ಧಾಂತವನ್ನು ತಲುಪಿಸೇಕು ಎಂದು ನಿರ್ಣಯ ಮಾಡಿದರು.
ರೆಡ್ಡಿ ಸಮಾಜದವರು ಎಲ್ಲಾ ಪಕ್ಷಗಳಲ್ಲಿದ್ದು, ಜಾತಿ ಆಧಾರದ ಮೇಲೆ ರಾಜಕೀಯ ಮಾಡದೇ ಯೋಗ್ಯತೆ, ಸೇವೆ, ಸಾಮರ್ಥ್ಯಕ್ಕೆ ತಕ್ಕಂತೆ ಗೌರವವನ್ನು ಪಡೆದು ಎಲ್ಲಾ ಸಮಾಜದವರನ್ನು ಅಪ್ಪಿಕೊಳ್ಳುವ ಮನಸ್ಥಿತಿ ಹೊಂದಿ, ಶೋಷಣೆಯ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡುವ ಮನಸ್ಸನ್ನು ಹೊಂದಿದವರಾಗಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಸಮಾಜ, ಮನುಕುಲದ ಉದ್ದಾರಕ್ಕಾಗಿ ಜೀವನವನ್ನು ತ್ಯಾಗ ಮಾಡಿದ್ದಕ್ಕಾಗಿ ಮಹಾಯೋಗಿ ವೇಮನರ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ವೇಮನರು 15ನೇ ಶತಮಾನದಲ್ಲಿ ಕವಿತೆಗಳನ್ನು ರಚಿಸಿದರು. ಅವುಗಳಲ್ಲಿ ಹೆಚ್ಚಿನವು ನಶಿಸಿ ಹೋಗಿವೆ. ಒಬ್ಬ ಬ್ರಿಟೀಷ್ ಅಧಿಕಾರಿ ತಾಳೆಗರಿಯಲ್ಲಿ ಬರೆದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರು ಎಂದರು.
ವೇಮನರು ದುಶ್ಚಟಕ್ಕೆ ದಾಸರಾಗಿರುತ್ತಾರೆ. ಆಗ ಅವರನ್ನು ಸರಿದಾರಿಗೆ ತಂದವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರು. ಅವರಿಂದ ವೇಮನರು ಪರಿವರ್ತನೆ ಹೊಂದಿ, ಸಮಾಜ ಸುಧಾರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಗಾಧ ಸಾಧನೆ ಮಾಡಿದ್ದಾರೆ ಎಂದು ಮಹಾಯೋಗಿ ವೇಮನರು ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜೀವನ ಸಾಧನೆಗಳನ್ನು ಕೊಂಡಾಡಿದರು.
ಶೇಖಣ್ಣ ಪ್ರಾಸ್ತವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನಿಯರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಮಾಜಿ ಸಚಿವ ಬಿ.ಆರ್. ಯಾವಗಲ್, ಕೆ.ವಿ. ಹಂಚಿನಾಳ, ಜಿಲ್ಲಾಧಿಕಾ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಎಸಿ ಗಂಗಪ್ಪ ಸೇರಿದಂತೆ
ಗಣ್ಯರು ಉಪಸ್ಥಿತರಿದ್ದರು. ಶಿವನಗೌಡರ ಸ್ವಾಗತಿಸಿದರು, ಬಾಹುಬಲಿ ಜೈನ್ ನಿರೂಪಿಸಿದರು.
ವೇಮನರು ಕೃಷಿಕರ ಮತ್ತು ಗೇಣಿದಾರರ ಪರವಾಗಿ ಹೋರಾಟ ಮಾಡಿದ್ದಾರೆ. ಇಂದು ಸಂವಿಧಾನದಲ್ಲಿರುವ ಸಮಾನತೆಗಳಂತ ಮೌಲ್ಯಗಳನ್ನು ಅಂದೇ ಅಳವಡಿಸಿ ಸಮಾಜದಲ್ಲಿ ಒಗ್ಗಟ್ಟನ್ನು ತಂದಿದ್ದಾರೆ. ಮಹಾಯೋಗಿ ವೇಮನ ಅವರ ಜಯಂತಿಯನ್ನು ಎಲ್ಲರೂ ಸಂಘಟಿತರಾಗಿ ಆಯೋಜಿಸಲಾಗಿದೆ ಎಂದು ಸಚಿವ ಡಾ. ಎಚ್.ಕೆ. ಪಾಟೀಲ ಸಂತಸ ವ್ಯಕ್ತಪಡಿಸಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ರೆಡ್ಡಿ ಭಾಂದವರು ವಿಶೇಷವಾಗಿ ಗದಗ, ಕೊಪ್ಪಳ, ಬಾಗಲಕೋಟಿ ಜಿಲ್ಲೆ ಸೇರಿದಂತೆ ಅನೇಕ ಜನರು ಪಾಲ್ಗೊಂಡು ವೇಮನ ಹಾಗು ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿ ಒಳಗೊಂಡAತೆ ಇತರೆ ಬೇಡಿಕೆಗಳನ್ನು ಇಟ್ಟಾಗ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಅವುಗಳನ್ನು ಕೆಲವೇ ತಿಂಗಳುಗಳಲ್ಲಿ ಅನುಷ್ಠಾನ ಮಾಡಿದ್ದಾರೆ.
– ಎಚ್.ಕೆ. ಪಾಟೀಲ.
ಸಚಿವರು.