ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಮಾತೃ ಭಾಷೆಯಾದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಕಾಸರಗೋಡು ಪ್ರದೇಶವು ಕೇರಳ ಪಾಲಾಯಿತು. ಬೆಳಗಾವಿ ಬೀದರ್ನಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚತ್ತಿದೆ. ರಾಯಚೂರು ಭಾಗವು ತೆಲುಗು ಭಾಷಿಕರ ಪಾಲಾಗುತ್ತಿದೆ ಎಂದು ಸಮ್ಮೇಳನ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಹೇಳಿದರು.
ಗಜೇಂದ್ರಗಡದಲ್ಲಿ ಸೋಮವಾರ ಜರುಗಿದ ಗದಗ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ಭಾಷಣ ಮಾಡಿದ ಅವರು, ಬೇಲೂರಿನ ಶಿಲಾ ಬಾಲಕೆಯರ ಒಂದು ಶಿಲೆಯನ್ನು ಕೆತ್ತಿದವರು ಗದಗ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಚಾರ ಎಂದರಲ್ಲದೆ, ನಾಡಿನ ಶಿಲ್ಪಕಲೆಗಳ ರಚನೆಯಲ್ಲಿ ಜಿಲ್ಲೆಯ ಮಹನೀಯರು ನೀಡಿರುವ ಅಪಾರ ಪಾತ್ರದ ಕುರಿತು ವಿವರಿಸಿದರು.
ಗ್ರಾಮೀಣ ಕೈಗಾರಿಕೋದ್ಯಮದಲ್ಲಿ ಜಾನಪದ, ಶಿಲ್ಪಕಲೆ ಬಿತ್ತರಿಸುವ ಕೆಲಸ ಆಗಬೇಕಿದೆ. ವಿಶೇಷವಾಗಿ ಜಾನಪದವನ್ನು ವಾಣಿಜ್ಯೀಕರಣ ಮಾಡಬೇಕಿದೆ. ಜಾನಪದಗಳು ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ಇದ್ದರೆ ಬೆಳೆಯುವುದಿಲ್ಲ. ಜಾನಪದಗಳು ಕಲಾವಿದರಿಂದ ಮಾತ್ರ ಬೆಳೆಯಲು ಸಾಧ್ಯ. ಜಿಲ್ಲೆಯಲ್ಲಿ ಚಾಮರಸನ ಬಗ್ಗೆ ಸಂಶೋಧನೆ, ಚೆನ್ನವೀರ ಕಣವಿ, ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಸ್ಥಾಪನೆ ಆಗಬೇಕಿದೆ. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸರ್ಕಾರ ಹೆಚ್ಚು ಉತ್ಸುಕವಾಗಬೇಕು ಎಂದರು.
ಸರ್ವಾಧ್ಯಕ್ಷರ ಕೊರಿಕೆಗಳು
* ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕ, ಮೂಲಭೂತ ಸೌಕರ್ಯ ಒದಗಿಸುವುದು.
* ಸಾಹಿತಿ, ಸಂಗೀತಗಾರ, ಕಲಾವಿದರ ಅಭಿವೃದ್ಧಿಗೆ ಜಿಲ್ಲೆಯಲ್ಲಿ ಅಕಾಡೆಮಿ ಸ್ಥಾಪನೆ.
* ರೈತ-ಗ್ರಾಹಕರಿಗೆ ಅನುಕೂಲ ಆಗಲು ಗದಗನಲ್ಲಿ `ಶನಿವಾರ ಸಂತೆ’ ಸ್ಥಾಪನೆ.
* ಕಪ್ಪತಗುಡ್ಡ ರಕ್ಷಣೆಗೆ ಒಕ್ಕೊರಲಿನ ನಿರ್ಣಯ.
* ಜಿಲ್ಲೆಯ ಎಲ್ಲ ಐತಿಹಾಸಿಕ ಸ್ಥಳಗಳ ಉತ್ಖನನವಾಗಲಿ.
* ಜಿಲ್ಲೆಯ ನೀರಾವರಿ ಯೋಜನೆಗಳಿಗೆ ವೇಗ ದೊರಕಲಿ.