ಹಾಸನ:- ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುನಿಗನಹಳ್ಳಿ ಗ್ರಾಮದಲ್ಲಿ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ಜರುಗಿದೆ.
ಮಿಸ್ಸಿಂಗ್ ಆಗಿರುವ ಈ ಮೂವರು ವಿದ್ಯಾರ್ಥಿಗಳು, ಕುನಿಗನಹಳ್ಳಿ ಗ್ರಾಮದ ಧರ್ಮಪ್ರಕಾಶ್, ಮನು ಹಾಗೂ ಕಿರುಹುಣಸೆ ಗ್ರಾಮದ ಮಹೇಂದ್ರ ಎಂಬುವವರ ಮಕ್ಕಳು ಎಂದು ಗುರುತಿಸಲಾಗಿದೆ.
ಮೂವರು ವಿದ್ಯಾರ್ಥಿಗಳು ಕುನಿಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಆದರವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಬುಧವಾರ ಬೆಳಿಗ್ಗೆ 7:30ಕ್ಕೆ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದರು. ಮೂವರು ಶಾಲೆಗೆ ಬಾರದ ಹಿನ್ನೆಲೆ ಶಿಕ್ಷಕರು ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಗಾಬರಿಗೊಂಡ ಪೋಷಕರು ತಮ್ಮ ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ.
ರಾತ್ರಿಯಾದರೂ ಮೂವರು ಮಕ್ಕಳು ಮನೆಗೆ ವಾಪಸ್ ಬಂದಿಲ್ಲ. ಇನ್ನೂ ನಾಪತ್ತೆಯಾಗಿರುವ ಶರತ್ ಬಳಿ ಮೊಬೈಲ್ ಫೋನ್ ಇದ್ದು, ಸ್ವಿಚ್ ಆಫ್ ಆಗಿದೆ. ಇದರಿಂದ ಪೋಷಕರಲ್ಲಿ ಆತಂಕ ಮನೆ ಮಾಡಿದೆ. ತಮ್ಮ ಮಕ್ಕಳನ್ನು ಹುಡುಕಿಸಿ ಕೊಡುವಂತೆ ಪೊಲೀಸರಿಗೆ ಪೋಷಕರು ದೂರು ಕೊಟ್ಟಿದ್ದಾರೆ.