ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ: ಹಿರಿಯ ವಿಜ್ಞಾನಿ ಪ್ರೊ. ಜಿ.ಯು. ಕುಲಕರ್ಣಿ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ವಿಜ್ಞಾನವಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯ. ದೇಶದ ಪ್ರಗತಿಯಲ್ಲಿ ವೈಜ್ಞಾನಿಕ ಸಂಶೋಧನೆ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಲ್ಲಿನ ಮಕ್ಕಳಲ್ಲಿ ವೈಜ್ಞಾನಿಕ ಸಂಶೋಧನೆಗಳ ಅಧ್ಯಯನದ ಮನೋಭಾವ ಬೆಳೆಸುವುದು ಮುಖ್ಯವಾಗಿದೆ ಎಂದು ಜವಹಾರಲಾಲ್ ನೆಹರು ಉನ್ನತ ಸಂಶೋಧನೆ ಕೇಂದ್ರದ ಅಧ್ಯಕ್ಷ ಹಾಗೂ ಹಿರಿಯ ವಿಜ್ಞಾನಿ ಪ್ರೊ. ಜಿ.ಯು. ಕುಲಕರ್ಣಿ ಅಭಿಪ್ರಾಯಪಟ್ಟರು.

Advertisement

ಅವರು ಶುಕ್ರವಾರ ಸ್ಕೂಲ್ ಚಂದನದಲ್ಲಿ 2 ದಿನಗಳ ಕಾಲ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಎಜ್ಯುಕೇಶನ್ ಫೌಂಡೇಶನ್, ಜವಾಹರಲಾಲ್ ನೆಹರು ಉನ್ನತ ಸಂಶೋಧನಾ ಕೇಂದ್ರ ಹಾಗೂ ಸ್ಕೂಲ್ ಚಂದನ ಶಾಲೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನದ ಬಗ್ಗೆ ಮಕ್ಕಳಲ್ಲಷ್ಟೇ ಅಲ್ಲದೇ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯವಾಗಬೇಕಾಗಿದೆ. ವಿಜ್ಞಾನ ಎಂದೆಂದಿಗೂ ಈ ಜಗತ್ತಿನಲ್ಲಿ ಶಾಶ್ವತವಾಗಿರುತ್ತದೆ. ಅದರ ಬಗ್ಗೆ ಮಕ್ಕಳಲ್ಲಿರುವ ಕುತೂಹಲವನ್ನು ಇಮ್ಮಡಿಗೊಳಿಸುವ ಕಾರ್ಯವಾಗಬೇಕು. ಈ ಕಾರ್ಯವನ್ನು ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಲಕ್ಮೇಶ್ವರದ ಸ್ಕೂಲ್ ಚಂದನದಲ್ಲಿ ಮಾಡುತ್ತಿದ್ದಾರೆ. ಪರಿಣಾಮ ಚಂದನ ಸಂಸ್ಥೆಯ ವಿದ್ಯಾರ್ಥಿಗಳು ಬಾಲ ವಿಜ್ಞಾನಿಗಳಾಗಿ ಗಮನ ಸೆಳೆಯುತ್ತಿರುವುದು ಪ್ರಶಂಸನೀಯ ಎಂದರು.

ಚಂದನ ಶಾಲೆ ಸಂಸ್ಥಾಪಕ ಅಧ್ಯಕ್ಷ ಟಿ.ಈಶ್ವರ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತರತ್ನ ಪ್ರೊ. ಸಿ.ಎನ್.ಆರ್ ರಾವ್ ಅವರು ಗ್ರಾಮೀಣ ಪ್ರದೇಶದ ಮಕ್ಕಳು ಸಹ ವಿಜ್ಞಾನದಲ್ಲಿ ಸಾಧನೆ ಮಾಡಬೇಕೆಂದು 7 ವರ್ಷಗಳಿಂದ ಸ್ಕೂಲ್ ಚಂದನದಲ್ಲಿ ವಿಜ್ಞಾನ ವಿಸ್ತೃತ ಕಾರ್ಯಕ್ರಮ ಸಂಘಟಿಸಿ, ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನಿಗಳಿಂದ ವಿಜ್ಞಾನ ಪಾಠಗಳನ್ನು ನೀಡುತ್ತಿದ್ದಾರೆ. ಸಿಎನ್‌ಆರ್ ಅವರು ಚಂದನ ಶಾಲೆಯ ಬಗ್ಗೆ ಇರುವ ಕಾಳಜಿ ಮತ್ತು ಪ್ರೀತಿಯಿಂದ ಸಾಕಷ್ಟು ಸಹಾಯ ಮತ್ತು ಪ್ರೋತ್ಸಾಹ ನೀಡುತ್ತಿರುವುದು ಸ್ಮರಣೀಯ.

ಮಕ್ಕಳಲ್ಲಿ ಸಂಶೋಧನಾ ಮನೋಭಾವನೆ ಬೆಳೆಸಲು ಶಾಲೆಯಲ್ಲಿ ಪೂರಕ ವಾತಾವರಣ ನಿರ್ಮಿಸಲಾಗಿದೆ. ದೇಶದ ಅಭಿವೃದ್ಧಿ ಸಂಶೋಧನೆಯ ಮೇಲೆ ನಿಂತಿದ್ದು, ಬಾಲ ವಿಜ್ಞಾನಿಗಳಾಗಿ ಈ ಸಂಸ್ಥೆಯ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಸಂಶೋಧನಾ ಕೇಂದ್ರದಲ್ಲಿ ಭಾರತರತ್ನ ಸಿಎನ್‌ಆರ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುವುದು ಹೆಮ್ಮೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಎಚ್.ಸಿ. ರಟಗೇರಿ, ಖ್ಯಾತ ವಿಜ್ಞಾನಿಗಳಾದ ಎಸ್.ಎಂ. ಶಿವಪ್ರಸಾದ, ಎನ್.ಎಸ್. ವಿದ್ಯಾಧಿರಾಜ್, ಡಾ. ಜಗದೀಶ ಅಂಗಡಿ, ಡಾ. ಜಯಶ್ರೀ, ಡಾ. ಕುಶಾಗ್ರ ಬನ್ಸಾಲ್, ಡಾ. ಪ್ರತಾಪ ವೈಷ್ಣೋಯಿ, ಡಾ. ವಿನಾಯಕ ಪತ್ತಾರ, ರೇವಣಸಿದ್ದಪ್ಪ, ಪ್ರಾಚಾರ್ಯ ಆರ್.ಜಿ. ಭಾವಾನವರ, ವಿದ್ಯಾರ್ಥಿ ಸಂಸತ್ ಕ್ಯಾಪ್ಟನ್ ತನು ಹಾಜರಿದ್ದರು.

ವಿದ್ಯಾಥಿಗಳಾದ ವಚನಾ, ಶಿಲ್ಪಾ, ಪ್ರಿಯಾಂಕಾ ಮತ್ತು ಸುರೇಶ ನಿರೂಪಿಸಿದರು. ವಿವಿಧ ಶಾಲಾ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು, ವಿಜ್ಞಾನ ಶಿಕ್ಷಕರು ಪಾಲ್ಗೊಂಡಿದ್ದರು.

ಡಾ. ಇಂದುಮತಿ ರಾವ್ ಅವರು ವರ್ಚುವಲ್ ಮೂಲಕ ಮಾತನಾಡಿ, ಲಕ್ಮೇಶ್ವರ ನನಗೆ ತವರು ಮನೆ ಇದ್ದಂತೆ. ಚಂದನ ಶಾಲೆಯನ್ನು ನಮ್ಮ ಶಾಲೆಯಾಗಿ ಸ್ವೀಕರಿಸಿದ್ದೇವೆ. ಇಲ್ಲಿರುವ ಮಕ್ಕಳು ನಮ್ಮ ಮಕ್ಕಳಿದಂತೆ ಎಂದ ಅವರು, ಭಾರತದ ಶ್ರೇಷ್ಠ ವಿಜ್ಞಾನಿಗಳಾದ ಪ್ರೊ. ಸಿ.ಎನ್.ಆರ್ ರಾವ್ ಅವರು ನಮ್ಮ ಶಾಲೆಗೆ ಕೊಟ್ಟ ಅವಕಾಶಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಭವಿಷತ್ತಿನ ದೇಶದ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು ಎಂದು ಸಲಹೆ ನೀಡಿದರು.


Spread the love

LEAVE A REPLY

Please enter your comment!
Please enter your name here