ವಿಜಯಸಾಕ್ಷಿ ಸುದ್ದಿ, ಗದಗ: ಅರ್ಹ ಮತದಾರರೆಲ್ಲರೂ ಮತದಾನದ ದಿನದಂದು ತಪ್ಪದೇ ಮತಗಟ್ಟೆಗೆ ತೆರಳಿ ನಿರ್ಭೀತಿಯಿಂದ ಮತ ಚಲಾಯಿಸಿ ನಿಮ್ಮಿಷ್ಟದ ವ್ಯಕ್ತಿ ಅಥವಾ ಸರ್ಕಾರ ರಚಿಸಲು ಮುಂದಾಗಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಹೇಳಿದರು.
ಶನಿವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಜರುಗಿದ `ರಾಷ್ಟ್ರೀಯ ಮತದಾರರ ದಿನಾಚರಣೆ’ಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮತದಾನದ ದಿನದಂದು ಮತ ಹಾಕದಿರಲು ವಿನಾಕಾರಣ ಕುಂಟುನೆಪ ಹೇಳದೆ ಮತದಾನ ಮಾಡಬೇಕು. ಮತದಾನದ ದಿನದಂದು ಮತ ಚಲಾವಣೆಗಾಗಿಯೇ ಅವಕಾಶ ಮಾಡಿಕೊಡಲಾಗುತ್ತದೆ. ಅದನ್ನು ಚಲಾಯಿಸಿ ತಮ್ಮಿಷ್ಟದ ವ್ಯಕ್ತಿಗಳ ಆಯ್ಕೆ ಮಾಡುವ ಹಕ್ಕನ್ನು ಮತದಾನದ ಮೂಲಕ ಮಾಡಬೇಕು. ಮತದಾನದ ದಿನದಂದು ಮತ ಚಲಾಯಿಸದೆ ಪಿಕ್ನಿಕ್ ಹೋಗುವುದು, ಮತದಾನ ಬಹಿಷ್ಕಾರ ಮಾಡುವುದು ಸರಿಯಾದ ಕ್ರಮವಲ್ಲ. ಸರ್ಕಾರ ನಮಗೆ ನೀಡಿದ ಮತದಾನದ ಹಕ್ಕನ್ನು ಸಮರ್ಥವಾಗಿ ಚಲಾಯಿಸೋಣ ಎಂದರು.
ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬದಲ್ಲಿ ನಾವೆಲ್ಲರೂ ಹುರುಪಿನಿಂದ ಪಾಲ್ಗೊಂಡು ಮತ ಚಲಾಯಿಸಿ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣದೊಂದಿಗೆ ಬಲಿಷ್ಠ ಭಾರತ ನಿರ್ಮಿಸೋಣ. ಯುವಜನರು ನಮ್ಮಿಷ್ಟದ ಸರ್ಕಾರ ರಚನೆಯಲ್ಲಿ ಮತದಾನದ ಮೂಲಕ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ ಮಾತನಾಡಿ, ಯುವಜನತೆ ತಮ್ಮ ಜ್ಞಾನ ಭಂಡಾರ, ಅನುಭವವನ್ನು ಮತ್ತು ರಾಷ್ಟಾçಭಿಮಾನವನ್ನು ಬೆಳೆಸಿಕೊಂಡು ಮತದಾನ ಮಾಡುವುದರ ಮೂಲಕ ದೇಶವನ್ನು ಸುಭದ್ರಗೊಳಿಸಬೇಕು. ಮತದಾನದ ವೇಳೆಯಲ್ಲಿ ಯಾವ ಅಭ್ಯರ್ಥಿಯೂ ಸೂಕ್ತವಲ್ಲ ಎನಿಸಿದರೆ ನೋಟಾ ಒತ್ತುವುದರ ಮೂಲಕ ಮತ ಚಲಾಯಿಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಚುನಾವಣಾ ಕಾರ್ಯ ನಿರ್ವಹಿಸಿದ ಐ.ಎಲ್.ಒ.ಗಳನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಸ್ವೀಪ್ ಸಮಿತಿ ಏರ್ಪಡಿಸಿದ ಪ್ರಬಂಧ, ಬಿತ್ತಿಚಿತ್ರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಯುವ ಮತದಾರರಿಗೆ ಸಂಕೇತಿಕವಾಗಿ ಮತದಾರರ ಚೀಟಿ ವಿತರಿಸಲಾಯಿತು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣಾ ಮುದುಕಮ್ಮನವರ ಸ್ವಾಗತಿಸಿದರು. ಪ್ರಾಚಾರ್ಯ ಬಸವರಾಜ ಗಿರಿತಿಮ್ಮಣ್ಣನವರ ಕಾರ್ಯಕ್ರಮ ನಿರ್ವಹಿಸಿದರು. ಉಪವಿಭಾಗಾಧಿಕಾರಿ ಗಂಗಪ್ಪ ಎಂ ವಂದಿಸಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅಧ್ಯಕ್ಷತೆ ವಹಿಸಿ, ಮತದಾನದ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿ, ಮತದಾರರಿಗೆ ತಮ್ಮ ಮತದಾನದ ಮಹತ್ವ ಕುರಿತು ಅರಿವು ಮೂಡಿಸಲು ರಾಷ್ಟಿçÃಯ ಮತದಾರರ ದಿನಾಚರಣೆ ಪ್ರೇರಣೆ ನೀಡಲಿ ಎಂಬ ಸದುದ್ದೇಶದಿಂದ ದಿನಾಚರಣೆ ಜಾರಿಗೊಳಿಸಲಾಯಿತು. ಸಮಾಜದಲ್ಲಿನ ಸರ್ವರಿಗೂ ಸಮಬಾಳು-ಸಮಪಾಲು ಲಭ್ಯವಾಗಬೇಕು. ಅರ್ಹರನ್ನು ಆಯ್ಕೆ ಮಾಡುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮತ ಚಲಾಯಿಸಬೇಕು. ಅದು ನಮ್ಮ ಕರ್ತವ್ಯ ಎಂದು ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಮತದಾನದ ಚೀಟಿ ಹೊಂದಿರುವವರು ಮತದಾನದ ಮಹತ್ವದ ಬಗ್ಗೆ ಜಾಗೃತರಾಗಬೇಕು ಮತ್ತು 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ಭಾರತ ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾದ ಜನವರಿ 25ರಂದು 2011ರಿಂದ ಪ್ರತಿ ವರ್ಷ ರಾಷ್ಟಿçÃಯ ಮತದಾರರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬಂದಿದೆ. ರಾಷ್ಟ್ರವನ್ನು ಮುನ್ನಡೆಸಲು ಮತ್ತು ಜನರ ಸಮಸ್ಯೆಗೆ ಸ್ಪಂದಿಸುವ ನಾಯಕರನ್ನು ಚುನಾಯಿಸಿ ನಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಮತದಾನವು ಭದ್ರ ಬುನಾದಿಯಾಗಿದೆ ಎಂದು ನ್ಯಾಯಮೂರ್ತಿ ಬಸವರಾಜ ತಿಳಿಸಿದರು.