ವಿಜಯಸಾಕ್ಷಿ ಸುದ್ದಿ, ಲಕ್ಮೇಶ್ವರ: ಸಮೀಪದ ಬಟ್ಟೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಚನಬಸವ್ವ ಫಕ್ಕೀರಪ್ಪ ಬಾರ್ಕಿ ಎಂಬುವವರ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಬೆಂಕಿಯ ಆರ್ಭಟಕ್ಕೆ ಮನೆಯಲ್ಲಿನ ಚಿನ್ನ, ಬೆಳ್ಳಿಯ ಆಭರಣಗಳು, ಎರಡು-ಮೂರು ದಿನಗಳ ಹಿಂದೆ ಸಾಲ ಮಾಡಿ ತಂದು ಇಟ್ಟಿದ್ದ ಹಣ ಸೇರಿದಂತೆ ಮನೆಯಲ್ಲಿನ ಪೀಠೋಪಕರಣಗಳು, ಕಪಾಟುಗಳು, ದವಸ-ಧಾನ್ಯಗಳು, ಪಾತ್ರೆಗಳು, ಕೃಷಿ ಸಲಕರಣೆಗಳು ಸುಟ್ಟು ಕರಕಲಾಗಿವೆ. ಅವಘಡದಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಅಗ್ನಿ ಶಾಮಕ ಠಾಣೆಗೆ ಕರೆ ಮಾಡಿದಾಗ, ಅಗ್ನಿಶಾಮಕ ವಾಹನ ಬರಲು ತಡವಾಗಿದ್ದರಿಂದ ಗ್ರಾಮಸ್ಥರೇ ಬೆಂಕಿ ನಂದಿಸಲು ಮುಂದಾಗಿದ್ದಾರೆ.
ನಾವು ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು, ಬೆಂಕಿ ಹೇಗೆ ಹೊತ್ತಿಕೊಂಡಿತೋ ಗೊತ್ತಿಲ್ಲ. 15 ವರ್ಷಗಳಿಂದ ಇದೇ ಗುಡಿಸಲಲ್ಲಿ ವಾಸ ಮಾಡುತ್ತಿದ್ದೇವೆ. ಗ್ರಾ.ಪಂ ಆಡಳಿತ ಮಂಡಳಿ ನಮಗೆ ಆಶ್ರಯ ಮನೆ ನೀಡಿಲ್ಲ ಎಂದು ಮನೆ ಮಾಲಿಕ ಫಕ್ಕಿರಪ್ಪ ಕಣ್ಣೀರು ಹಾಕಿದರು.
ಸರ್ಕಾರ ಬಡವರಿಗಾಗಿ ಆಶ್ರಯ ಮನೆ ನೀಡುತ್ತಿದ್ದರೂ, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಇಂತವರಿಗೆ ಮನೆಗಳನ್ನೇಕೆ ಕೊಡುವದಿಲ್ಲ ಎನ್ನುವ ಪ್ರಶ್ನೆ ಮೂಡುವಂತಾಗಿದೆ. ಈಗಲಾದರೂ ಇಂತಹ ಬಡವರನ್ನು ಗುರುತಿಸಿ ಆಶ್ರಯ ಮನೆಗಳನ್ನು ಕೊಡುವ ಕಾರ್ಯವನ್ನು ಗ್ರಾ.ಪಂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾಡಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.