ನವದೆಹಲಿ:- ಕೇಂದ್ರ ಸರ್ಕಾರದ 2025-2026ನೇ ಸಾಲಿನ ಬಜೆಟ್ ಮಂಡನೆಗೆ ಕೌಂಟ್ ಡೌನ್ ಶುರುವಾಗಿದ್ದು, ಇಂದು ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ಬಾರಿಯ ಬಜೆಟ್ ಕುರಿತು ವಿವಿಧ ವಲಯಗಳು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿವೆ. 140 ಕೋಟಿ ಭಾರತೀಯರ ಕನಸುಗಳು ಈಡೇರಿಸುವ ಹಂಬಲ ಹೊತ್ತಿರುವ ಕೇಂದ್ರ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ. ದೇಶದ ಆರ್ಥಿಕ ಚಟುವಟಿಕೆಗೂ ಉತ್ತೇಜನ ನೀಡಬೇಕು, ಹಣದುಬ್ಬರದ ಸುಳಿಗೆ ಸಿಲುಕಿರುವ ಬಡವರು, ಮಧ್ಯಮ ವರ್ಗದ ಜನರು ಮತ್ತು ಸಣ್ಣಪುಟ್ಟ ವ್ಯಾಪಾರಿಗಳಿಗೆ ಪೂರಕವಾದ ಬಜೆಟ್ ಮಂಡಿಸುವ ಸವಾಲು ಕೇಂದ್ರದ ಮುಂದಿದೆ. ಹೀಗಾಗಿ ನಿರೀಕ್ಷೆಗಳು ಸಾಕಷ್ಟಿದ್ದು, ಸರ್ಕಾರ ಹೇಗೆ ಸಮತೋಲನ ಸಾಧಿಸಲಿದೆ ಎಂಬ ಕುತೂಹಲವು ಇದೆ.
ಆಸ್ತಿ ತೆರಿಗೆ ವಿಚಾರದಲ್ಲಿ ಸಾಕಷ್ಟು ಬದಲಾವಣೆ ಆಗಬಹುದು ಎಂದು ಹೇಳಲಾಗುತ್ತಿದೆ. ತೆರಿಗೆ ಸ್ಲಾಬ್ ಗಳಲ್ಲಿ ಹೊಸ ನಿಯಮ ಜಾರಿ, ಆದಾಯ ತೆರಿಗೆ ವಿನಾಯಿತಿ, ಶೇಕಡಾ 30ರಷ್ಟು ತೆರಿಗೆ ಸ್ಲಾಬ್ ಆದಾಯ ಮಿತಿ 15 ರಿಂದ 20 ಲಕ್ಷಕ್ಕೆ ಏರಿಕೆ ಸಾಧ್ಯತೆ, ಗೃಹ ಸಾಲಗಳಿಗೆ ತೆರಿಗೆ ವಿನಾಯಿತಿ, ಮಹಿಳೆ ಮತ್ತು ವಿದ್ಯಾರ್ಥಿಗಳ ಪರ ಹೊಸ ಯೋಜನೆ ಘೋಷಣೆ ಆಗಬಹುದು ಎನ್ನಲಾಗಿದೆ. ಜನರಿಗೆ ತೆರಿಗೆ ಹೊರೆ ಆಗದಂತೆ ತಡೆಯಲು ತೆರಿಗೆ ಸ್ತರದಲ್ಲಿ ಬದಲಾವಣೆ ಆಗಬಹುದು. ಮಂದಗತಿಯ ದೇಶದ ಆರ್ಥಿಕತೆಗೆ ವೇಗವು ಈ ಬಜೆಟ್ನಿಂದ ಸಿಗಬಹುದು ಎನ್ನಲಾಗಿದೆ.