ಮೈಸೂರು: ದೂರದೃಷ್ಟಿ ಇಲ್ಲದ ಬಜೆಟ್, ಒಂದೇ ಒಂದು ಬೇಡಿಕೆಯೂ ಈಡೇರಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ನಾನು ಇನ್ನೂ ಪೂರ್ಣ ಬಜೆಟ್ ಓದಿಲ್ಲ. ಬಜೆಟ್ ಭಾಷಣವನ್ನು ಪೂರ್ಣವಾಗಿ ನೋಡಿಲ್ಲ.
ಬರೀ ಮುಖ್ಯಾಂಶಗಳನ್ನು ನೋಡಿದ್ದೇನೆ. ದೇಶದ ಹಿತದೃಷ್ಟಿಯಿಂದ, ಕರ್ನಾಟಕ ಹಿತದೃಷ್ಟಿಯಿಂದ ನಿರಾಶದಾಯಕ ಬಜೆಟ್. ದೂರದೃಷ್ಟಿ ಇಲ್ಲದ ಬಜೆಟ್. ರಾಜ್ಯವೂ ಅನೇಕ ಬೇಡಿಕೆಗಳನ್ನು ಇಟ್ಟಿತ್ತು. ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಒಂದೇ ಒಂದು ಬೇಡಿಕೆಯೂ ಈಡೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಗಾತ್ರವೂ ಕಡಿಮೆ ಆಗಿದೆ. ಕಳೆದ ಬಾರಿಗಿಂತ 1.04 ಲಕ್ಷ ಕೋಟಿ ಕಡಿಮೆ ಆಗಿದೆ. ತೆರಿಗೆ ಅವರು ಅಂದುಕೊಂಡಷ್ಟು ಸಂಗ್ರಹಿಸಿಲ್ಲ. ಕೇಂದ್ರ ಸರ್ಕಾರ ಸಾಲ 15,68,936 ಕೋಟಿ ಸಾಲ ಪಡೆಯುತ್ತಿದೆ. 12,70,000 ಕೋಟಿ ರೂ. ಬಡ್ಡಿ ಕಟ್ಟುತ್ತಿದೆ. ಈ ದೇಶದ ಸಾಲದ ಪ್ರಮಾಣ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿ ರೂ.ಗೆ ಏರುತ್ತಿದೆ. ಈ ಬಜೆಟ್ ನಿರಾಶದಾಯಕ ಬಜೆಟ್. ಕರ್ನಾಟಕಕ್ಕೆ ವಿರುದ್ದವಾಗಿರುವ ಬಜೆಟ್ ಇದು ಎಂದು ವಾಗ್ದಾಳಿ ನಡೆಸಿದರು.