ವಿಜಯಸಾಕ್ಷಿ ಸುದ್ದಿ, ಗದಗ:ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮನಾಗಿದ್ದು, ಕನ್ನಡಿಗರಿಗೆ ಶೈಕ್ಷಣಿಕ, ಆರ್ಥಿಕ ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕಾದರೆ ಕನ್ನಡಿಗರು ಜಾಗೃತರಾಗಿ ಸಂಘಟಿತರಾಗಬೇಕಾಗಿದೆ. ಹೊರ ರಾಜ್ಯದಿಂದ ಬಂದ ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ನೀಡುವುದರಲ್ಲಿ ತಾತ್ಸಾರ ಭಾವನೆ ಹೊಂದಿದ್ದಾರೆ. ಆದ್ದರಿಂದ ಕನ್ನಡಿಗರು ಜಾಗೃತರಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ನಿಂಗರಾಜಗೌಡ್ರ ಹೇಳಿದರು.
ಅವರು ಗದಗ ನಗರದ ಡಾ. ಬಾಬು ಜಗಜೀವನರಾಂ ಸಭಾಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಗದಗ ಜಿಲ್ಲಾ ಘಟಕದ ಆಶ್ರಯದಲ್ಲಿ ಕನ್ನಡಿಗರ ಜಾಗೃತಿ ಸಮಾವೇಶ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡಚಪ್ಪ ಹಳ್ಳಿಕೇರಿ, ರಾಜ್ಯ ಕಾರ್ಯಾಧ್ಯಕ್ಷ ರಾಮು ತಳವಾರ, ಸುರೇಶ್ ಗಾಂಧಿ, ಪುನೀತ್ ಕವಡೆ, ಧಾರವಾಡ ಜಿಲ್ಲಾಧ್ಯಕ್ಷ ವಿಜಯ ಪುಟ್ಟಣ್ಣನವರ, ಗದಗ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಅಡೂರ, ಜಿಲ್ಲಾ ಉಪಾಧ್ಯಕ್ಷ ಅಜಯ್ ಕಂಬಳಿ, ಜಿಲ್ಲಾ ರೈತ ಘಟಕದ ಅಧ್ಯಕ್ಷ ಮುತ್ತಣ್ಣ ಮುಂಡವಾಡ, ಲಕ್ಮೇಶ್ವರ ತಾಲೂಕಾಧ್ಯಕ್ಷ ನಾಗೇಶ ಅಮರಾಪುರ, ಶಿರಹಟ್ಟಿ ತಾಲೂಕಾಧ್ಯಕ್ಷ ವೀರೇಶ ಪಸಾರದ, ನರಗುಂದ ತಾಲೂಕಾಧ್ಯಕ್ಷ ವಿನಾಯಕ ಚತ್ರಬಾವಿ, ಗದಗ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಉಳ್ಳಾಗಡ್ಡಿ, ನರಗುಂದ ಮಹಿಳಾ ಘಟಕದ ಅಧ್ಯಕ್ಷೆ ಕಾವ್ಯ ಹುಂಬಿ, ಲಕ್ಮೇಶ್ವರ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ವಿಜಯ ಸೋಮನಾಥ, ಜರಿನಾ ಮುಲ್ಲಾ, ಮುತ್ತಣ್ಣ ಗಡೆಪ್ಪನವರ, ಮಂಜಪ್ಪ ದೇಸಹಳ್ಳಿ, ಮೈನುದ್ದಿನ ಮನಿಯಾರ, ಬಸವರಾಜ ವಡವಿ ಮುಂತಾದವರು ಉಪಸ್ಥಿತರಿದ್ದರು. ನಾಗೇಶ ಅಮರಾಪುರ ಸ್ವಾಗತಿಸಿದರು. ಉಡಚಪ್ಪ ಹಳ್ಳಿಕೇರಿ ಕಾರ್ಯಕ್ರಮ ನಿರೂಪಿಸಿದರು.
ಗದಗ ಜಿಲ್ಲಾಧ್ಯಕ್ಷ ಹಾಗೂ ಬೆಳಗಾವಿ ವಿಭಾಗದ ಅಧ್ಯಕ್ಷರಾದ ಶರಣು ಗೋಡಿ ಮಾತನಾಡಿ, ಕರ್ನಾಟಕದಲ್ಲಿ ರಾಜ್ಯವನ್ನಾಳಿದ ಅನೇಕ ಅರಸ ಮನೆತನಗಳು ನಮ್ಮದೇ ಮಾದರಿಯಾಗಿವೆ. ಕನ್ನಡದ ಇಮ್ಮಡಿ ಪುಲಕೇಶಿ, ಕೃಷ್ಣದೇವರಾಯ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಅನೇಕರ ಸಾಧನೆಗಳನ್ನು ಕನ್ನಡಿಗರಿಗೆ ತಿಳಿಸುವ ಕಾರ್ಯವಾಗಬೇಕಾಗಿದೆ ಎಂದು ಹೇಳಿದರು.