ಚಿಕ್ಕಬಳ್ಳಾಪುರ:- ಬಾವಿ ನೀರಲ್ಲಿ ದುಬಾರಿ ಬುಲೆಟ್ ಬೈಕೊಂದು ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹರಿಹರಪುರದ ಬಳಿ ಜರುಗಿದೆ. ಇದೀಗ ಬುಲೆಟ್ ಬೈಕ್ ಸುತ್ತ ಈಗ ಅನುಮಾನದ ಹುತ್ತ ಬೆಳೆದಿದೆ.
ಹರಿಹರಪುರ ಗ್ರಾಮದ ಬಳಿ ರಸ್ತೆ ಬದಿ ರೈತ ಪಾಪಣ್ಣ ಎಂಬುವವರ ಜಮೀನಿನಲ್ಲಿರೋ ಪಾಳು ಬಾವಿಯಲ್ಲಿ ಈ ಬುಲೆಟ್ ಬೈಕ್ ಪತ್ತೆಯಾಗಿದೆ. ರೈತ ಪಾಪಣ್ಣ ಪಕ್ಕದ ತೋಟದ ರೈತರೊಬ್ಬರು ತಮ್ಮ ಬೆಳೆಗೆ ನೀರು ಹಾಯಿಸೋಕೆ ಅಂತ ಬಾವಿಯ ನೀರನ್ನ ಮೇಲೆತ್ತಲು ಮೋಟಾರು ಬಿಡಲು ಹೋದಾಗ ಬಾವಿಯಲ್ಲಿ ಬೈಕ್ ಕಾಣಿಸಿದೆ. ಅರೇ ಇದೇನಪ್ಪಾ ಅಂತ ಭಯದಿಂದ ನೀರನ್ನೆಲ್ಲಾ ಖಾಲಿ ಮಾಡಿ ಬೈಕ್ ಮೇಲೆತ್ತುವ ಪ್ರಯತ್ನ ನಡೆಸಿದ್ದಾರೆ.
ಈ ಬಾವಿಯಲ್ಲಿನ ನೀರನ್ನ ಕೃಷಿಗೆ ಬಳಸುತ್ತಿರಲಿಲ್ಲ. ಬಾವಿಯಿದ್ದ ಜಮೀನಿನಲ್ಲಿ ಯಾವುದೇ ಬೆಳೆ ಸಹ ಬೆಳೆಯುತ್ತಿರಲಿಲ್ಲ. ಆದ್ರೆ ಪಕ್ಕದ ಜಮೀನಿನವರು ಬೆಳೆಗೆ ನೀರು ಹಾಯಿಸಲು ಟ್ರಾನ್ಸ್ಫಾರ್ಮರ್ ಕೈ ಕೊಟ್ಟಿದೆ. ಇದ್ರಿಂದ ಕೊಳವೆಬಾವಿಯ ನೀರು ಮೇಲತ್ತಾಲಾಗದೇ ಬಾವಿಯಲ್ಲಿನ ನೀರು ಬಳಸಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಬುಲೆಟ್ ಬೈಕ್ ಕಾಣಿಸಿದೆ. ಹಾಗಾಗಿ ಬೆಳಗ್ಗೆಯಿಂದಲೂ ಬಾವಿಯಲ್ಲಿನ ನೀರನ್ನ ಹೊರಹಾಕಿ ಬೈಕ್ ಮೇಲೆ ಎತ್ತಲು ಹರಸಾಹಸ ಪಟ್ಟಿದ್ದಾರೆ. ಹಗ್ಗ ಕಟ್ಟಿ ಬುಲೆಟ್ ಬೈಕ್ ಮೇಲೆ ತರುವ ಪ್ರಯತ್ನ ಮಾಡಲಾಗುತ್ತಿದ್ದು ಪದೇ ಪದೇ ಹಗ್ಗ ಕಟ್ ಆಗಿ ಬೈಕ್ ನೀರಿಗೆ ಬೀಳುತ್ತಿದೆ. ಘಟನೆಯಿಂದ ಜನ ಸಹ ಆತಂಕಕ್ಕೀಡಾಗಿದ್ದಾರೆ.
ಪೊಲೀಸರು ಘಟನೆ ಸಂಬಂಧ ಸೂಕ್ತ ತನಿಖೆ ಕೈಗೊಂಡಿದ್ದಾರೆ.