ಧಾರವಾಡ: ಟಾವು ಮಾಡಿ ಒಂದೆಡೆ ಒಟ್ಟಲಾಗಿದ್ದ ಕಡಲೆ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿರುವ ಘಟನೆ ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.
ಕರಡಿಗುಡ್ಡ ಗ್ರಾಮದ ಊರ ಹೊರಗಿನ ಖುಲ್ಲಾ ಜಾಗದಲ್ಲಿ ಕರಡಿಗುಡ್ಡ ಗ್ರಾಮದ ಅನೇಕ ರೈತರು ಕಡಲೆ ಹಾಗೂ ಹುರುಳಿ ಬೆಳೆಯ ಬೆಳೆಗಳನ್ನು ಮಶಿನ್ಗೆ ಹಾಕಿಸಲು ಒಟ್ಟಿದ್ದರು.
ಆದರೆ, ಆಕಸ್ಮಿಕವಾಗಿ ಬಣವೆಗಳಿಗೆ ಬೆಂಕಿ ಹತ್ತಿದ್ದರಿಂದ ಅಪಾರ ಪ್ರಮಾಣದ ಕಡಲೆ ಹಾಗೂ ಹುರುಳಿ ಬೆಳೆ ಬೆಂಕಿಗೆ ಆಹುತಿಯಾಗಿದೆ. ಇದರಿಂದಾಗಿ ಅಂದಾಜು 10 ಲಕ್ಷದಷ್ಟು ನಷ್ಟವುಂಟಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದರು.



