ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಮಾನವನ ಜೀವನದಲ್ಲಿ ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದು. ಈ ಸಮಯದಲ್ಲಿ ನೀವು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡರೆ ನಿಮ್ಮ ಜೀವನ ಸುಂದರ ಮತ್ತು ಸುಖಮಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಮಾಜದಲ್ಲಿ ಸತ್ಪçಜೆಗಳಾಗಿ ಬಾಳಲು ವಿದ್ಯಾರ್ಥಿ ಜೀವನ ಪೂರಕವಾಗಿರುತ್ತದೆ. ಶಾಲಾ-ಕಾಲೇಜು ದಿನಗಳಲ್ಲಿ ಉತ್ತಮ ನಡತೆ ಹಾಗೂ ಶಿಸ್ತಿನ ಜೀವನವನ್ನು ಅಳವಡಿಸಿಕೊಂಡಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದ ಜೀವನದಲ್ಲಿ ಉತ್ತಮ ಗುರಿಯನ್ನು ಸಾಧಿಸುತ್ತಾನೆ ಎಂದು ಮಾಜಿ ಶಾಸಕ ಮಹಾಂತೇಶ ಕವಟಗಿಮಠ ಹೇಳಿದರು.
ಪಟ್ಟಣದ ಅನ್ನದಾನೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ಸನ್ನು ಗಳಿಸಲು ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ಜೀವನದಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಸಕ್ರಿಯರಾಗಿರಬೇಕು. ಮನುಷ್ಯನ ಬದುಕಿನಲ್ಲಿ ಅತ್ಯವಶ್ಯಕವಾಗಿರುವ ಶಿಕ್ಷಣ ಭವಿಷ್ಯದ ದೊಡ್ಡ ಸಾಧನೆಗೆ ಮೌನಕ್ರಾಂತಿಯ ಅಸ್ತ್ರವಿದ್ದಂತೆ. ಬೆಳಕನ್ನು ಇಷ್ಟಪಡುವವರು ದೀಪದ ಕಾಳಜಿ ಮಾಡಬೇಕು ಎಂದರು.
ಉಪನಿರ್ದೇಶಕ ಸಿದ್ದಲಿಂಗ ಬಂಡು ಮಾತನಾಡಿ, ಸ್ವಂತ ಶಕ್ತಿಯಿಂದ ಬದುಕು ರೂಪಿಸಿಕೊಳ್ಳಲು ಶಿಕ್ಷಣ ಅತ್ಯವಶ್ಯಕ. ಶಿಕ್ಷಕ ವೃತ್ತಿಯಲ್ಲಿ ಕಳೆದುಕೊಳ್ಳುವಂಥದ್ದು ಏನೂ ಇಲ್ಲ. ಬೋಧನೆ ಮಾಡಿದಷ್ಟೂ ಗಳಿಸಿಕೊಳ್ಳುವುದೇ ಹೆಚ್ಚು. ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಸಂಸ್ಕಾರದ ಪಠ್ಯದೊಂದಿಗೆ ಸ್ಪರ್ಧಾತ್ಮಕ ವಿಷಯಾಧಾರಿತ ಶಿಕ್ಷಣ ನೀಡಿದಾಗ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಮೂಡಲು ಸಾಧ್ಯ ಎಂದರು.
ಪ್ರಾಚಾರ್ಯ ಎಂ.ಸಿ. ಕಟ್ಟಿಮನಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯನ್ನು ಮನೋಸ್ಥೈರ್ಯದಿಂದ ಎದುರಿಸಿ, ಹೆಚ್ಚಿನ ಅಂಕಗಳನ್ನು ಗಳಿಸಿಕೊಳ್ಳಬೇಕೆಂಬುದರ ಕುರಿತು ಹೇಳಿದರು. ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ಪರಿಸರ ಸ್ನೇಹ ಹೇಗಿರುತ್ತದೆಯೋ ಹಾಗೆ ನಾವಿರುತ್ತೇವೆ. ನಮ್ಮ ವ್ಯಕ್ತಿತ್ವಕ್ಕೆ ನಮ್ಮ ಗೆಳೆಯರ ಬಳಗವೂ ಕಾರಣವಾಗುತ್ತದೆ. ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಬೇಕೆನ್ನುವವರು ಉತ್ತಮ ಗೆಳೆಯರ ಸ್ನೇಹ ಮಾಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಅಧ್ಯಕ್ಷ ಎಂ.ಜಿ. ಸೋಮನಕಟ್ಟಿ, ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಶೈಕ್ಷಣಿಕ ಮೇಲ್ವಿಚಾರಕ ಬಿ.ಎಸ್. ಗೌಡರ, ಸದಸ್ಯರಾದ ಬಸವರಾಜ ಕಳಕಣ್ಣವರ, ಎಂ.ಪಿ. ಪಾಟೀಲ, ವಿ.ಎಸ್. ಧೋತ್ರದ, ಪ್ರಾಚಾರ್ಯ ವೈ.ಸಿ. ಪಾಟೀಲ ಸೇರಿದಂತೆ ಸಿಬ್ಬಂದಿಯವರಿದ್ದರು.
ಪ್ರಾಚಾರ್ಯ ಬಸವರಾಜ ಮೊಳೆಕಿರಿ ಮಾತನಾಡಿ, ಈ ಸಂಸ್ಥೆಯನ್ನು ಕಂಡು ಆನಂದವಾಗಿದೆ. ಇಲ್ಲಿನ ಸಂಸ್ಕಾರ ಮನಸ್ಸಿಗೆ ತುಂಬಾ ಸಂತೋಷ ನೀಡಿದೆ. ಜೀವನದ ಅತ್ಯಂತ ಮಹತ್ವದ ಹಂತದಲ್ಲಿರುವ ನೀವು ನಿಮ್ಮ ಪರೀಕ್ಷೆ ಮತ್ತು ಅಭ್ಯಾಸದ ಬಗ್ಗೆ ಗಮನವನ್ನು ಕೇಂದ್ರೀಕರಿಸಿರಿ. ಇಂದಿನಿಂದಲೇ ಸಾಧನೆ ಮಾಡಿದರೆ ಖಂಡಿತ ಉತ್ತಮ ಫಲಿತಾಂಶ ಪಡೆಯುವಿರಿ ಎಂದರು.