ವಿಜಯಸಾಕ್ಷಿ ಸುದ್ದಿ, ಗದಗ: ಛತ್ರಪತಿ ಶಿವಾಜಿ ಮಹಾರಾಜರು ನಮ್ಮ ದೇಶದ ಶ್ರೇಷ್ಠ ಸ್ವಾಭಿಮಾನಿ, ರಾಷ್ಟ್ರ ಪ್ರೇಮಿ, ಸಾಹಸಿ, ದಕ್ಷ ಆಡಳಿತಗಾರರು. ಧೈರ್ಯದಲ್ಲಿ ಯಾರನ್ನೂ ಅವರೊಂದಿಗೆ ಹೋಲಿಸಲು ಸಾಧ್ಯವಿಲ್ಲ ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಇವರುಗಳ ಸಹಯೋಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕು ಸೊರಟೂರು ಶಿವಾಜಿ ಮಹಾರಾಜರ ಕುಟುಂಬದ ಮೂಲ ಊರು ಆಗಿದ್ದು, ಇದು ಗದಗ ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ. ಶಿವಾಜಿ ಮಹಾರಾಜರ ಮೂಲವನ್ನು ತಿಳಿಸಿದ ಸಂಶೋಧಕ ಢೇರೆ ಅವರು ಶಿವಾಜಿಯವರ ಕುರಿತಾಗಿ ಹಲವಾರು ವಿಚಾರಗಳನ್ನು ಬರೆದಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ ವಂಶಸ್ಥರ ಮೂಲ ಸ್ಥಳ ಈಗಿನ ಗದಗ ಜಿಲ್ಲೆಯ ಸೊರಟೂರು ಎಂದು ತಿಳಿಸಿದರು. ಇದನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡಿಗರೆಲ್ಲರಿಗೂ ಶಿವಾಜಿ ಕರ್ನಾಟಕದವರೆಂದು ಪರಿಚಯಿಸಿದವರು ಸರ್ಜೂ ಕಾಟ್ಕರ್ ಎಂದು ತಿಳಿಸಿದರು.
ಸರ್ಕಾರ ಆಚರಿಸುವ ಮಹಾನ್ ಪುರುಷರ ಜಯಂತಿ ಆಚರಣೆಗಳ ಉದ್ದೇಶ ವಿಫಲವಾಗದಂತೆ ಜಿಲ್ಲಾಡಳಿತ ಗಮನಹರಿಸಬೇಕು. ಜಯಂತಿಗಳು ಸಂಬಂಧಿಸಿದ ಸಮುದಾಯಕ್ಕಷ್ಟೇ ಸೀಮಿತಗೊಳಿಸದೇ ಸರ್ವರನ್ನೂ ಆಹ್ವಾನಿಸಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವವು ಬಹಳ ದೊಡ್ಡದಾಗಿದೆ. ಶಿವಾಜಿ ಮಹಾರಾಜರು ಅನ್ಯಾಯದ ವಿರುದ್ಧ ಹೋರಾಟ ಮಾಡಿದ ಧೀಮಂತ ನಾಯಕರು. ಹಿಂದೂಗಳು ಹಾಗೂ ದಲಿತರಿಗೆ ಹಿಂಸೆ ಕೊಡುತ್ತಿದ್ದ ಪರಕೀಯರ ವಿರುದ್ಧ ಸಿಡಿದೆದ್ದು ಹೋರಾಡಿದರು. ತಾಯಿ ಜೀಜಾಬಾಯಿಯವರಿಂದ ಒಳ್ಳೆಯ ಸಂಸ್ಕಾರ ಕಲಿತ ಶಿವಾಜಿ ಮಹಾರಾಜರು ಗುರುಗಳಾದ ಸಂತ ರಾಮದಾಸ್ ಅವರ ಮಾರ್ಗದರ್ಶನದಲ್ಲಿ ಆದರ್ಶ ರಾಜರಾಗಿ ದಕ್ಷತೆಯಿಂದ ಆಡಳಿತ ನಡೆಸಿದರು. ಶಿವಾಜಿ ಮಹಾರಾಜರ ಜಯಂತಿಯನ್ನು ಎಲ್ಲ ಸಮಾಜದ ಜನರು ಒಗ್ಗೂಡಿ ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಗದಗ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಮರಾಠಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರುಣಕುಮಾರ್ ಚವ್ಹಾಣ, ಉಪಾಧ್ಯಕ್ಷ ಬಸವರಾಜ ಹುಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮಾಜದ ಗಣ್ಯರು ಹಿರಿಯರು ಹಾಜರಿದ್ದರು.
ಕಲಾವಿದ ಡಾ. ವೆಂಕಟೇಶ ಅಲ್ಕೋಡ ಹಾಗೂ ಸಂಗಡಿಗರ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ ಸ್ವಾಗತಿಸಿದರು. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು.
ನಿವೃತ್ತ ಉಪನ್ಯಾಸಕರಾದ ಪ್ರೊ. ಹನುಮಂತ ಎನ್.ಕಾಳೆ ಉಪನ್ಯಾಸ ನೀಡಿ, ಶಿವಾಜಿ ಮಹಾರಾಜರು ಅಷ್ಟ ದಿಗ್ಗಜರನ್ನು ಆಸ್ಥಾನದಲ್ಲಿಟ್ಟುಕೊಂಡು ದಕ್ಷ ಆಡಳಿತ ನಡೆಸಿದವರು. ಹಿಂದೂ ಸಾಮ್ರಾಜ್ಯವನ್ನು ಅತ್ಯುನ್ನತ ಸ್ಥಾನದಲ್ಲಿರುವಂತೆ ಹೋರಾಡಿದವರೇ ಛತ್ರಪತಿ ಶಿವಾಜಿಯವರು. ನೀತಿವಂತ, ವಿಚಾರಶೀಲ, ಧರ್ಮವಂತ, ಸುಶೀಲ, ಪರೋಪಕಾರಿ ರಾಜನಾಗಿದ್ದರು ಎಂದು ತಮ್ಮ ಪತ್ರದಲ್ಲಿ ವರ್ಣಿಸಿದ್ದಾರೆ. ಬುಡಕಟ್ಟು ಜನಾಂಗದವರಿಗೆ ಶಿಕ್ಷಣ, ಸಂಸ್ಕೃತಿ, ನಾಗರಿಕತೆ ಕೊಡಿಸಿದ ಹೆಗ್ಗಳಿಕೆ ಶಿವಾಜಿಯವರಿಗೆ ಸಲ್ಲುತ್ತದೆ ಎಂದು ವಿವರಿಸಿದರು.
**ಕೋಟ್**
ನಮ್ಮ ದೇಶದ ಸ್ವಾತಂತ್ರö್ಯದ ಕಹಳೆ ಊದಿದ ದಕ್ಷ ಆಡಳಿತಗಾರರು. ಶಿವಾಜಿ ಮಹಾರಾಜರ ತತ್ವಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಇಂತಹ ಪುಣ್ಯ ಪುರುಷರ ಜಯಂತಿಗಳನ್ನು ಇನ್ನಷ್ಟು ಸಂಭ್ರಮದಿAದ ಅರ್ಥಪೂರ್ಣವಾಗಿ ಆಚರಿಸಬೇಕು. ಶಿವಾಜಿಯವರ ಕುರಿತು ಮತ್ತಷ್ಟು ಆಳವಾದ, ಸುದೀರ್ಫವಾದ ಚಿಂತನೆ ನಡೆಸುವ ಕೆಲಸವಾಗಬೇಕು. ಶಿವಾಜಿಯವರ ತತ್ವಗಳಿಂದ ಯುವಜನರು ಸ್ವಾಭಿಮಾನ, ಧೈರ್ಯ ಹಾಗೂ ರಾಷ್ಟçಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು.
– ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.