ಕೋಲಾರ:- ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಾಕರಸನಹಳ್ಳಿ ಬಳಿ ಒಂಟಿ ಆನೆ ದಾಳಿಗೆ ರೈತ ಮಹಿಳೆಯೊಬ್ಬರು ಬಲಿಯಾದ ಘಟನೆ ಜರುಗಿದೆ.
44 ವರ್ಷದ ಮಂಜುಳ ಮೃತ ಮಹಿಳೆ. ಸಾಕರಸನಹಳ್ಳಿ ಗ್ರಾಮದ ಹೊರ ವಲಯದ ತೋಟದ ಮನೆ ಬಳಿ ಘಟನೆ ನಡೆದಿದೆ. ಮಂಜುಳ ಮೂತ್ರ ವಿಸರ್ಜನೆಗೆಂದು ಮುಂಜಾನೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಹೋದ ವೇಳೆ ಒಂಟಿ ಸಲಗ ದಾಳಿ ನಡೆಸಿದೆ.
ಘಟನೆಯಿಂದ ಸಾಕರಸನಹಳ್ಳಿ ಸೇರಿದಂತೆ ಕಾಡಂಚಿನ ಗ್ರಾಮಗಳ ರೈತರಲ್ಲಿ ಆತಂಕ ಮನೆಮಾಡಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಒಂಟಿ ಸಲಗ ದಾಳಿಯ ಭೀತಿಯಲ್ಲಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.



