ಬೆಂಗಳೂರು:- ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಮಾಡಿರುವ ತಮ್ಮ ಮೇಲಿನ ಕಡತ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಡಿ ರೂಪಾ ಮೌದ್ಗಿಲ್ ಸ್ಪಷ್ಟನೆ ಕೊಟ್ಟಿದ್ದಾರೆ.
ಕರ್ನಾಟಕ ಐಪಿಎಸ್ ಅಧಿಕಾರಿಗಳಾದ ವರ್ತಿಕಾ ಕಟಿಯಾರ್ ಹಾಗೂ ಡಿ ರೂಪಾ ಮೌದ್ಗಿಲ್ ನಡುವಿನ ಆರೋಪ ಪ್ರತ್ಯಾರೋಪ ಜೋರಾಗಿದೆ. ಈಗಾಗಲೇ ರೂಪ ವಿರುದ್ಧ ವರ್ತಿಕಾ ಅವರು ಕೆಲ ಗಂಭೀರ ಆರೋಪಗಳನ್ನು ಮಾಡಿ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದಾರೆ. ಯಾವುದೇ ಮಾಹಿತಿ ನೀಡದೇ ತಮ್ಮ ಕಚೇರಿ ಕಡತ ತರಿಸಿಕೊಂಡಿದ್ದಾರೆ ಅಂತೆಲ್ಲಾ ಆರೋಪ ಮಾಡಿದ್ದಾರೆ.
ಹೀಗಾಗಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರೂಪ ಅವರು ಪತ್ರ ಬರೆದು ಸ್ಪಷ್ಟನೆ ಕೊಟ್ಟಿದ್ದಾರೆ.
6-9-2024ರಂದು ಕೆಲವು ಕಾನ್ಸ್ಟೆಬಲ್ಗಳು ಫೈಲ್ಗಳನ್ನು ತಮ್ಮ ಕೊಠಡಿಯಿಂದ ತೆಗೆದುಕೊಂಡು ಹೋಗಿದ್ದಾರೆ. ಹಾಗೇ ಕೆಲ ಫೈಲ್ಗಳ ಫೋಟೋಗಳನ್ನು ತೆಗೆದುಕೊಂಡಿದ್ದಾರೆ ಎಂದು ವರ್ತಿಕಾ ಹೇಳುತ್ತಾರೆ. ಆದ್ರೆ, ಅವರು ಯಾವುದೇ ಪುರಾವೆಗಳಿಲ್ಲದೆ ಈ ಅಸಂಬದ್ಧ ಮತ್ತು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕಾನ್ಸ್ಟೆಬಲ್ಗಳ ಯಾವುದೇ ಹೇಳಿಕೆಗಳಿಲ್ಲ, ಫೈಲ್ಗಳ ಫೋಟೋ ತೆಗೆದುಕೊಂಡಿರುವ ಯಾವುದೇ ಪುರಾವೆಗಳಿಲ್ಲ. ಅವರ ಕೊಠಡಿ ಮತ್ತು ನನ್ನ ಕೊಠಡಿಯ ಮುಂದಿನ ಕಾರಿಡಾರ್ನಲ್ಲಿ ಕನಿಷ್ಠ 5 ಸಿಸಿಟಿವಿ ಕ್ಯಾಮೆರಾಗಳಿವೆ. ಅವರು ಯಾವುದೇ ಸಿಸಿಟಿವಿ ದೃಶ್ಯಾವಳಿಗಳನ್ನು ಲಗತ್ತಿಸಿಲ್ಲ ಎಂದು ರೂಪಾ ಅವರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಒಂದು ವೇಳೆ ಈ ರೀತಿ ಘಟನೆ ನಡೆದಿದ್ದರೆ ವರ್ತಿಕಾ ಆಂತರಿಕ ಭದ್ರತಾ ವಿಭಾಗದ ಹಿರಿಯ ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ? ನನ್ನ ಮೇಲೆ ಎಡಿಜಿ ಐಎಸ್ಡಿ ಇದ್ದಾರೆ. ಪೊಲೀಸ್ ಮಹಾನಿರ್ದೇಶಕ ಐಎಸ್ಡಿ ಇದ್ದಾರೆ ಮತ್ತು ಪೊಲೀಸ್ ಪಡೆಯ ಮುಖ್ಯಸ್ಥರಾಗಿರುವ ಡಿಜಿ ಮತ್ತು ಐಜಿಪಿ ಇದ್ದಾರೆ. ಈ ಬಗ್ಗೆ ಅವರು ಏಕೆ ಇವರುಗಳ ಗಮನಕ್ಕೆ ತರಲಿಲ್ಲ. ನನ್ನ ಮೇಲೆ ಕೆಲವು ಕಡತಗಳ ಕಳ್ಳತನ ಮಾಡಿರುವ
ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ನಿಷ್ಪಕ್ಷಪಾತ ತನಿಖೆಗಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ಬರೆಯಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ದಾರೆ.
ಅವರು ಸ್ವತಃ ನ್ಯಾಯಾಧೀಶರಾಗಿದ್ದಾರೆ. ಅವರು ನನ್ನ ಖ್ಯಾತಿಗೆ ಕಳಂಕ ತರುವ ಮತ್ತು ನನಗೆ ಮಾನಹಾನಿ ಮಾಡುವ ಏಕೈಕ ಉದ್ದೇಶದಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಅವರ ಕ್ರಮಗಳು ಅಶಿಸ್ತು ಮತ್ತು ಘೋರ ದುಷ್ಕೃತ್ಯಕ್ಕೆ ಸಮಾನ. ಪೊಲೀಸ್ ಇಲಾಖೆಯು ಶಿಸ್ತುಬದ್ಧವಾಗಿದೆ. ಮುಖ್ಯ ಕಾರ್ಯದರ್ಶಿಗೆ ನೇರವಾಗಿ ಬರೆಯುವ ಕ್ರಮಗಳು ಅವಿಧೇಯತೆಗೆ ಸಮಾನವಾಗಿರುತ್ತದೆ. ಹೀಗಾಗಿ ವರ್ತಿಕಾ ಕಟಿಯಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮೇಲ್ನೋಟಕ್ಕೆ ಆರೋಪಗಳು ಅಸಂಬದ್ಧವಾಗಿವೆ. ಏಕೆಂದರೆ ನಾನು ಹಿರಿಯ ಅಧಿಕಾರಿಯಾಗಿದ್ದೇನೆ. ಹೀಗಾಗಿ ಅಧಿಕೃತವಾಗಿ ಯಾವುದೇ ಫೈಲ್ಗಳನ್ನು ತರಸಿಕೊಳ್ಳಬಹುದು ಮತ್ತು ವಿಲೇವಾರಿ ಮಾಡಬಹುದು. ಆದ್ರೆ, ಅವರು ಯಾವುದೇ ತಲೆಬುಡವಿಲ್ಲದ ಸುಳ್ಳು ಹೇಳುತ್ತಿದ್ದಾರೆ. ವರ್ತಿಕಾ ಕಟಿಯಾರ್ ಅವರು ವೈಯಕ್ತಿಕ ಕಾರಣಗಳಿಗಾಗಿ ಇತರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಸುಳ್ಳು ಆರೋಪಗಳನ್ನು ಮಾಡುತ್ತಾರೆ ಎಂದು ಕೆಲ ಉದಾಹರಣೆಗಳ ಸಮೇತ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ.