ಬೆಂಗಳೂರು:- KPSC ಪರೀಕ್ಷೆಯ ಲೋಪದೋಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಪರದಾಟ ನಡೆಸುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಕೆಪಿಎಸ್ಸಿ ಪರೀಕ್ಷೆಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯನವರು ನೀಡಿದ ಉತ್ತರದ ಸಂಬಂಧ ಬಿ.ವೈ.ವಿಜಯೇಂದ್ರ ಅವರು ಸದನದಲ್ಲಿ ಮಾತನಾಡಿದರು. ಕೆಪಿಎಸ್ಸಿ ಲೋಪದೋಷದಿಂದ ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಂಬಂಧ ಪರದಾಡುವಂತಾಗಿದೆ. ಇದನ್ನು ಆದಷ್ಟು ಬೇಗ ಪರಿಹರಿಸಿ. ಇವತ್ತು ಪಕ್ಷಾತೀತವಾಗಿ ಎಲ್ಲರೂ ಇದರ ಪರವಾಗಿದ್ದಾರೆ. ಲೋಪದೋಷಗಳು ಆಗಿದ್ದು, ಅದಕ್ಕೆ ಕಾರಣಗಳೇನು ಎಂಬುದನ್ನು ಗಮನಿಸಬೇಕಿದೆ ಎಂದು ನುಡಿದರು.
ಪರೀಕ್ಷೆಗಳಾದರೂ ಫಲಿತಾಂಶ ಬಾರದೆ ಇರುವುದು. ಫಲಿತಾಂಶ ಹೊರಕ್ಕೆ ಬಂದರೂ ಸಂದರ್ಶನ ನಡೆಯದೇ ಇರುವುದು. ಹೀಗೆ ಅನೇಕ ಲೋಪದೋಷಗಳು ಅನೇಕ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿವೆ ಎಂದು ವಿವರಿಸಿದರು. ಇದು ತಾರ್ಕಿಕ ಅಂತ್ಯಕ್ಕೆ ಹೋಗಲೇಬೇಕಿದೆ. ಮಾನ್ಯ ಮುಖ್ಯಮಂತ್ರಿಗಳೂ ಒಳ್ಳೆಯ ರೀತಿ ಉತ್ತರ ಕೊಟ್ಟಿದ್ದಾರೆ. ವಿಪಕ್ಷ ನಾಯಕರೂ ಸೇರಿ ಎಲ್ಲರೂ ಮಾತನಾಡಿದ್ದಾರೆ. ಇದೊಂದು ತಾರ್ಕಿಕ ಅಂತ್ಯ ಕಾಣಬೇಕಿದೆ ಎಂದರು.