ವಿಜಯಸಾಕ್ಷಿ ಸುದ್ದಿ, ಗದಗ: ರಂಗಭೂಮಿ ಕುರಿತು ವಿಶೇಷ ಆಸಕ್ತಿ ಹೊಂದಿ ಗದುಗಿನ ಸಾಂಸ್ಕೃತಿಕ ಪರಿಸರವನ್ನು ಶ್ರೀಮಂತಗೊಳಿಸುವಲ್ಲಿ ಡಾ. ಬಿ. ಭಾಸ್ಕರ ಅವರ ಕೊಡುಗೆ ಅಪಾರವಾದುದು. ತಮ್ಮ ಅಭಿನಯ ಮತ್ತು ಕಲಾ ಪೋಷಣೆಯನ್ನು ವೈದ್ಯಕೀಯ ವೃತ್ತಿಗಿಂತಲೂ ಹೆಚ್ಚು ಪ್ರೀತಿಸಿದವರು. ಅಭಿನಯರಂಗ ಸಂಸ್ಥೆಯ ಅಧ್ಯಕ್ಷರಾಗಿ ಮಹತ್ವದ ಕಾರ್ಯವನ್ನು ಮಾಡಿದವರು ಎಂದು ಡಾ. ಜಿ.ಬಿ. ಪಾಟೀಲ ತಿಳಿಸಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಭಿನಯರಂಗದ ಸಹಯೋಗದಲ್ಲಿ ಜರುಗಿದ ಡಾ. ಬಿ. ಭಾಸ್ಕರ ಹಾಗೂ ಕಾವೆಂಶ್ರೀ ನುಡಿನಮನ ಸಭೆಯಲ್ಲಿ ಮಾತನಾಡಿ, ಕಾವೆಂಶ್ರೀ ಅವರು ಕಲಾಚೇತನದ ಮೂಲಕ ನಾಡಿನ ಹೆಸರಾಂತ ಸಾಹಿತಿ, ಕಲಾವಿದರನ್ನು ಗದುಗಿಗೆ ಕರೆಸಿ ಸಾಹಿತ್ಯಾಸಕ್ತರ ಮನವನ್ನು ತಣಿಸುವ ಕಾರ್ಯ ಮಾಡಿದ್ದಾರೆ. ಇವರೀರ್ವರ ಅಗಲುವಿಕೆ ಸಾಂಸ್ಕೃತಿಕ ಪರಿಸರಕ್ಕೆ ತುಂಬಲಾರದ ನಷ್ಟ ಎಂದು ತಿಳಿಸಿದರು.
ರಂಗ ಕಲಾವಿದೆ ಕವಿತಾ ಕಾಶಪ್ಪನವರ ಮಾತನಾಡಿ, ನಿರ್ದೇಶಕ ಜಯತೀರ್ಥ ಜೋಶಿ ಅವರ ನಿರ್ದೇಶನದಲ್ಲಿ ಗದುಗಿನ ಕೊನೇರೆ ಹೊಂಡದಲ್ಲಿ ಅಭಿನಯಿಸಲ್ಪಟ್ಟ `ತಲೆದಂಡ’ ನಾಟಕದಲ್ಲಿ ಮಂಚಣ್ಣ ಕ್ರಮಿತ ಪಾತ್ರದಲ್ಲಿ ಡಾ. ಬಿ. ಭಾಸ್ಕರರ ಅಭಿನಯ ರಂಗಾಸಕ್ತರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಯುವ ಕಲಾವಿದರಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು ಎಂದರು.
ಪ್ರೊ. ಚಂದ್ರಶೇಖರ ವಸ್ತçದ ಮಾತನಾಡಿ, ಕಾವೆಂಶ್ರೀ ಅವರ ಸಾಂಸ್ಕೃತಿಕ ಪ್ರೀತಿ ಅನುಕರಣೀಯ. ಕರಾವಳಿಯ ಕಲೆಯನ್ನು ಬಯಲು ಸೀಮೆಗೆ ಪರಿಚಯಿಸುವ, ಶ್ರೇಷ್ಠ ಸಾಹಿತಿ, ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಿದ್ದಾರೆಂದು ತಿಳಿಸಿದರು. ಅರವಿಂದ ಹುಯಿಲಗೋಳಕರ, ಸಿ.ಕೆ.ಎಚ್. ಕಡಣಿಶಾಸ್ತ್ರಿ, ಅನಂತಮೋಹನ ಭಟ್, ಲಿಂಗರಾಜ ಬಗಲಿ ಮೊದಲಾದವರು ನುಡಿನಮನ ಸಲ್ಲಿಸಿದರು.
ಶೇಖರ ಸಜ್ಜನರ ಮಾತನಾಡಿ, ಡಾ. ಬಿ. ಭಾಸ್ಕರ ಅವರ ಸ್ಮರಣಾರ್ಥ ನಾಟಕೋತ್ಸವವನ್ನು ಏರ್ಪಡಿಸಿ ಶೃದ್ಧಾಂಜಲಿ ಸಲ್ಲಿಸೋಣ. ಕಲಾ ಪ್ರದರ್ಶನಕ್ಕೆ ಆರ್ಥಿಕ ಸಮಸ್ಯೆ ತಲೆದೋರದ ಹಾಗೆ ನಾವೆಲ್ಲ ಸಹಕಾರ ನೀಡೋಣ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಡಾ. ಬಿ. ಭಾಸ್ಕರ ಅವರು ವ್ಯಕ್ತಿತ್ವ ವಿಕಸನದ ತರಬೇತುದಾರರಾಗಿದ್ದರು. ಮಕ್ಕಳ ಬಗೆಗಿನ ಅಪಾರವಾದ ಜ್ಞಾನವನ್ನು ಶಿಕ್ಷಕರಿಗೆ ತಲುಪಿಸುವ ಕಾರ್ಯದಲ್ಲಿ ಕೈಜೋಡಿಸಿದರು. ಅಂತೆಯೇ ಕಾವೆಂಶ್ರಿ ಅವರು 25ಕ್ಕೂ ಅಧಿಕ ವರ್ಷಗಳ ಕಾಲ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳ ಆಯೋಜನೆ ಮಾಡಿ ಗದುಗಿನ ಸಾಂಸ್ಕೃತಿಕ ಲೋಕಕ್ಕೆ ಕಳೆ ತಂದಿದ್ದಾರೆ. ಪ್ರಧಾನಮಂತ್ರಿಗಳ ಪ್ರೀತಿಗೂ ಪಾತ್ರರಾಗಿದ್ದರು ಎಂದು ತಿಳಿಸಿದರು.
ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಡಿ.ಎಸ್. ಬಾಪುರಿ ವಂದಿಸಿದರು. ಭಾರತಿ ಕೋಟಿ, ಅಕ್ಕಮಹಾದೇವಿ ರೊಟ್ಟಿಮಠ, ಆರ್.ಡಿ. ಕಪ್ಪಲಿ, ಬಸವರಾಜ ಗಣಪ್ಪನವರ, ರುದ್ರಣ್ಣ ಗುಳಗುಳಿ, ಡಾ. ಅನಂತ ಶಿವಪೂರ, ಜೆ.ಎ. ಪಾಟೀಲ, ಶರಣಪ್ಪ ಹೊಸಂಗಡಿ, ಟೀಕಾನದಾರ, ಸತೀಶ ಚನ್ನಪ್ಪಗೌಡರ ಮೊದಲಾದವರು ಭಾಗವಹಿಸಿದ್ದರು.
ಅಭಿನಯರಂಗದ ಸಂಸ್ಥಾಪಕ ಅಧ್ಯಕ್ಷರಾದ ಸುಶಿಲೇಂದ್ರ ಜೋಶಿ ಮಾತನಾಡಿ, ಬಿ. ಭಾಸ್ಕರ ಅವರ ಸಹಾಯ-ಸಹಕಾರದಿಂದ ಅಭಿನಯರಂಗ ಹೊಸ ರೂಪವನ್ನು ಪಡೆಯಿತು. ಅನೇಕ ನಾಟಕಗಳ ರಂಗಪ್ರಯೋಗ ಸಾಧ್ಯವಾಯಿತು. ಆರ್ಥಿಕ ಬೆಂಬಲ ದೊರೆತಿದ್ದರಿಂದ ಕಲಾಪ್ರದರ್ಶನ ನಿರಂತರವಾಗಿ ಜರುಗಲು ಅನುಕೂಲವಾಯಿತೆಂದು ತಿಳಿಸಿದರು.