ಮಹಿಳೆಯರ ಮೇಲಿನ ದೌರ್ಜನ್ಯ ವಿಷಾದನೀಯ

0
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಭಾರತವು ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದು, ಮಾತೃದೇವೋ ಭವ ಎನ್ನುವ ಪೂಜ್ಯನೀಯ ಭಾವವನ್ನ ಸಮರ್ಪಿಸಿದೆ. ಆದರೂ ಸಹ ಮಾನವನ ಅತ್ಯಾಸೆಯಿಂದ ಅಲ್ಲಲ್ಲಿ ಮಹಿಳೆಯ ಮೇಲೆ ದೌರ್ಜನ್ಯಗಳು ನಡೆಯುತ್ತಿರುವದು ವಿಷಾದನೀಯ ಎಂದು ಮುಂಡರಗಿ ಸಂಸ್ಥಾನಮಠದ ಶ್ರೀ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮಿಜಿ ಹೇಳಿದರು.

Advertisement

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಜ. ಅನ್ನದಾನೀಶ್ವರ ಅಕ್ಕನ ಬಳಗದಿಂದ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಪೂಜ್ಯರು ಆಶೀರ್ವಚನ ನೀಡುತ್ತಿದ್ದರು.

ಮಹಿಳೆಯರು ಧಾರ್ಮಿಕ ಆಚರಣೆಗಳಲ್ಲಿ ತೊಡಗಬೇಕು. ಅಂದಾಗ ಕುಟುಂಬದಲ್ಲಿರುವ ಸದಸ್ಯರಿಗೆ ಹಾಗೂ ಮಕ್ಕಳಿಗೂ ಸಹ ಒಳ್ಳೆಯ ಸಂಸ್ಕಾರಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಲದೇ ಉದ್ಯೋಗದ ಕಡೆಯೂ ಮಹಿಳೆ ಗಮನ ಹರಿಸಬೇಕಾಗಿದ್ದು, ಕುಟುಂಬಕ್ಕೆ ನೆರವಾಗುವ ಮೂಲಕ ತನ್ನ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ಕನ್ನಿಕಾ ಪರಮೇಶ್ವರಿ ಮಹಿಳಾ ಮಂಡಳ ಅಧ್ಯಕ್ಷೆ ಸ್ವಾತಿ ಅಳವಂಡಿ ಮಾತನಾಡಿ, ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಅನ್ಯಾಯಗಳ ವಿರುದ್ಧ ಮಹಿಳಾ ಸಂಘಟನೆಗಳು ಧ್ವನಿ ಎತ್ತಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ನದಾನೀಶ್ವರ ಅಕ್ಕನ ಬಳಗದ ಅಧ್ಯಕ್ಷರಾದ ಲಕ್ಷ್ಮೀದೇವಿ ಬೆಳವಟಗಿಮಠ ವಹಿಸಿದ್ದರು. ವೇ. ಚೆನ್ನವೀರಯ್ಯಸ್ವಾಮಿ ಹಿರೇಮಠ ಉಪಸ್ಥಿತರಿದ್ದರು. ಇದೇ ವೇಳೆ ಅಕ್ಕನ ಬಳಗದ ಸದಸ್ಯರು ಪ್ರದರ್ಶಿಸಿದ ಹೇಮರೆಡ್ಡಿ ಮಲ್ಲಮ್ಮಳ ರೂಪಕ ಪ್ರದರ್ಶನ ಎಲ್ಲರನ್ನೂ ಆಕರ್ಷಿಸಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳಾ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು. ಜ್ಯೋತಿ ಜೋಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಎನ್‌ಎಚ್‌ಎಂ ಅಕ್ಕನ ಬಳಗ ನಡೆದು ಬಂದ ಕುರಿತು ವರದಿ ವಾಚನಗೈದರು. ಶಕುಂತಲಾ ಹಂಪಿಮಠ ಹಾಗೂ ಶ್ವೇತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರೆ, ಸಂಗೀತಾ ಕೊರಡಕೇರಿ ವಂದಿಸಿದರು. ಅನ್ನದಾನೀಶ್ವರ ಅಕ್ಕನ ಬಳಗ, ಕನ್ನಿಕಾ ಪರಮೇಶ್ವರಿ ಮಹಿಳಾ ಮಂಡಳ ಹಾಗೂ ಹೊಳಲು ವಿರಕ್ತಮಠದ ಅಕ್ಕನ ಬಳಗದ ಸಸ್ಯರು ಪಾಲ್ಗೊಂಡಿದ್ದರು.

ಹೊಳಲು ವಿರಕ್ತಮಠದ ಅಕ್ಕನಬಳಗದ ಅಧ್ಯಕ್ಷರಾದ ಶಾರದಾ ವೆಂಕಟಾಪುರ ಮಾತನಾಡಿ, ಲಿಂಗ ತಾರತಮ್ಯತೆಯನ್ನ ಹೋಗಲಾಡಿಸಿ, ಸಮಾನತೆಯ ಸಂದೇಶ ಸಾರಿಸವರು ಸಾವಿತ್ರಿಭಾಯಿ ಫುಲೆ ಅವರು. ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗುವ ಮೂಲಕ ಪಿತೃಪ್ರಭುತ್ವವನ್ನು ಸೋಲಿಸಿ, ಮಹಿಳಾ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟು ಇಂದು ನಮಗೆಲ್ಲ ಆದರ್ಶರಾಗಿದ್ದಾರೆ ಎಂದರು.


Spread the love

LEAVE A REPLY

Please enter your comment!
Please enter your name here