ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ರಾಜ್ಯದಲ್ಲಿ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಹೀಗಾಗಿ ರಾಜ್ಯದಲ್ಲಿನ ಜನತೆಗೆ ಆತಂಕ ಮನೆ ಮಾಡುತ್ತಿದೆ. ಇನ್ನೊಂದೆಡೆ ಸರ್ಕಾರವು ದಿನಕ್ಕೊಂದು ಆದೇಶ ಹೊರಡಿಸುವ ಮೂಲಕ ಜನರಲ್ಲಿ ಆತಂಕದ ಜೊತೆಗೆ ಗೊಂದಲ ಸೃಷ್ಟಿಸುತ್ತಿದೆ.
ರಾಜ್ಯದಲ್ಲಿ ಈಗಾಗಲೇ 14 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ. ಲಾಕ್ ಡೌನ್ ಮಾರ್ಗಸೂಚಿಯನ್ನು ಕೂಡ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಇದೀಗ ಈ ಮಾರ್ಗಸೂಚಿಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ಮತ್ತೆ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಮದುವೆಗೆ 50 ಜನರಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಅದರ ಮಿತಿಯನ್ನು ಇಳಿಕೆ ಮಾಡಿದೆ. ಕೇವಲ 40 ಜನರಿಗಷ್ಟೇ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ. ಮದುವೆಗಳನ್ನು ಕಲ್ಯಾಣ ಮಂಟಪದಲ್ಲಿ ನೆರವೇರಿಸಲು ಅವಕಾಶ ಇಲ್ಲ. ಹೀಗಾಗಿ ತಮ್ಮ ತಮ್ಮ ಮನೆಗಲ್ಲಿಯೇ ಮಾಡಿಕೊಳ್ಳಬೇಕಾಗಿದೆ. ಮದುವೆಯಲ್ಲಿ ಭಾಗವಹಿಸುವವರಿಗೆ ಸ್ಥಳೀಯಾಡಳಿತಗಳಿಂದ ಪಾಸ್ ವಿತರಿಸಬೇಕು.
ಅಲ್ಲದೇ, ಈ ಆದೇಶದಲ್ಲಿ ಕಬ್ಬಿಣದ ಅದಿರು, ಗಣಿಗಾರಿಕೆಗೆ ಹಾಗೂ ಸಿಮೆಂಟ್ ಬಳಸುವ ಲೈಮ್ ಸ್ಟೋನ್ ತಯಾರಿಕೆಗೆ ಅನುಮತಿ ನೀಡಲಾಗಿದೆ.