ಕುಂದಾಪುರ: ಇತ್ತೀಚೆಗೆ ದೇವಾಲಯದ ಕಾಣಿಕೆ ಹುಂಡಿಗಳಲ್ಲಿ ವಿಚಿತ್ರವಾದ ಹರಕೆ, ಬೇಡಿಕೆಗಳ ನ್ನಿಟ್ಟುಕೊಂಡು ಪತ್ರಗಳನ್ನು ಹಾಕುವುದು ಹೆಚ್ಚಾಗುತ್ತಿದೆ. ಮನಸ್ಸಿನಲ್ಲಿ ಅದೇನೋ ಹರಕೆ, ಬೇಡಿಕೆಯನ್ನಿಟ್ಟುಕೊಂಡು ಕಾಗದದಲ್ಲಿ ಬರೆದು ಅದನ್ನು ಹುಂಡಿಗೆ ಹಾಕುವುದು ಸಾಮಾನ್ಯವಾಗಿದೆ.
ಅದೇ ರೀತಿ ಕುಂದಾಪುರದ ಹೊಳ ಮಗ್ಗಿ ಹೊರ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ವಿದ್ಯಾರ್ಥಿಯೊಬ್ಬ ನನ್ನನ್ನು ಜಸ್ಟ್ ಪಾಸ್ ಮಾಡು ಎಂದು ಚೀಟಿ ಬರೆದು ದೇವರಿಗೆ ಮನವಿ ಮಾಡಿದ್ದಾನೆ. ದೈವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಯುವ ವೇಳೆ ವಿದ್ಯಾರ್ಥಿ ಜಸ್ಟ್ ಪಾಸ್ ಮಾಡುವಂತೆ ಕೋರಿದ್ದ ಚೀಟಿ ಲಭ್ಯವಾಗಿದ್ದು, ಇದರ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಕುರಿತ ಫೋಟೋವನ್ನು Namma Kundapura ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಶೇರ್ ಮಾಡಲಾಗಿದೆ. ಈ ಚೀಟಿ ಫೋಟೋದಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಬರಬೇಕು ದೇವರೇ ಹೊರ ಬೊಬ್ಬರ್ಯ; ಗಣಿತ- 39, 38, 37, 36, ಇಂಗ್ಲೀಷ್- 39, 38, 37, ಕನ್ನಡ- 40, 39 ವಿಜ್ಞಾನ- 39, 38, ಹಿಂದಿ- 40, 39, ಸಮಾಜ ವಿಜ್ಞಾನ- 38, 37 ಮತ್ತೆ ಇದಕ್ಕಿಂತ ಕಡಿಮೆ ಅಂಕ ಬೇಡ ದೇವರೆ” ಎಂದು ಪರೀಕ್ಷೆಯಲ್ಲಿ ಜಸ್ಟ್ ಪಾಸ್ ಮಾಡಿಸುವಂತೆ ಮನವಿ ಮಾಡಿದ್ದಾನೆ.