ಬೆಂಗಳೂರು:- ಬೆಲೆಏರಿಕೆ ಕಾಂಗ್ರೆಸ್ ಅಘೋಷಿತ ಗ್ಯಾರಂಟಿ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಸುರೇಶ್ ಕುಮಾರ್ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು , ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಲಿನ ದರವನ್ನು 9 ರೂ. ಏರಿಕೆ ಮಾಡಿದೆ. ಈಗ ಹಾಲಿನ ದರ, ಮುಂದೆ ನೀರಿನ ದರ, ಆಮೇಲೆ ವಿದ್ಯುತ್ ದರ, ಬಹುಶಃ ಸೇವಿಸುವ ಗಾಳಿಗೂ ಬೆಲೆ ನಿಗದಿ ಪಡಿಸುವ ದಿನ ಬಹಳ ದೂರ ಇಲ್ಲ ಎಂದರು.
ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹಧನ ನೀಡ ಬೇಕೆಂಬುದು ಒಪ್ಪಿತ ಮಾತು. ಹಾಗೆಂದ ಮಾತ್ರಕ್ಕೆ ಗ್ರಾಹಕರ ಜೇಬಿನಿಂದ ಕಿತ್ತು ಕೊಡುವುದು ಕಾಂಗ್ರೆಸ್ ಸರ್ಕಾರ ಹೇಳಿಕೊಳ್ಳುವ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ, ಆಗಸ್ಟ್ 2023 ರಲ್ಲಿ, ಹಾಲಿನ ಬೆಲೆ ಲೀಟರ್ಗೆ 3 ರೂ.ಗಳಷ್ಟು ಏರಿಕೆಯಾಯಿತು. ಅದಾದ ಬಳಿಕ 2024ರ ಜೂನ್ 26ಕ್ಕೆ ನಂದಿನಿಯ ಎಲ್ಲಾ ಹಾಲಿನ ಬೆಲೆಯನ್ನು 2 ರೂಪಾಯಿ ಏರಿಕೆ ಮಾಡಿತು. ಈಗ ಮತ್ತೊಂದು ಸುತ್ತಿನ ಹಾಲಿನ ಬೆಲೆ ಏರಿಕೆಯಾಗಿದೆ. ಏಪ್ರಿಲ್ 1 ರಿಂದ ಹಾಲಿನ ದರ ಲೀಟರ್ 4 ರೂಪಾಯಿ ಏರಿಕೆ ಘೋಷಣೆ ಮಾಡಿದೆ.
ಇದರೊಂದಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಲೀಟರ್ ಹಾಲಿನ ಬೆಲೆಯಲ್ಲಿ 9 ರೂಪಾಯಿ ಏರಿಕೆ ಮಾಡಿದಂತಾಗಿದೆ. ಇನ್ನೊಂದು ವಿಚಾರವೇನೆಂದರೆ ಬರೀ ಹಾಲು ಮಾತ್ರವಲ್ಲ ಮೊಸರು ಕೂಡ ಲೀಟರ್ಗೆ 4 ರೂಪಾಯಿ ಏರಿಕೆ ಮಾಡಿದೆ.
ಎಲ್ಲಾ ಪೋಷಕಾಂಶಗಳನ್ನು ಹೊಂದಿದ ಸಂಪೂರ್ಣ ಆಹಾರದಲ್ಲಿ ಮೊಟ್ಟೆಯನ್ನು ಹೊರತುಪಡಿಸಿದರೆ ಹಾಲಿಗೆ ಮೊದಲ ಅಗ್ರಸ್ಥಾನ. ಬಹುಶಃ ನಗರ ಪ್ರದೇಶದಲ್ಲಿ ಶ್ರೀಮಂತರು ಮಾತ್ರ ಹಾಲನ್ನು ಬಳಸಬೇಕೆ? ಬಡ ಮಧ್ಯಮ ವರ್ಗ ಹಾಲನ್ನು ಬಳಸಬಾರದೇ? ಹಾಲು ಹಾಲಾಹಲವಾಗುವ ಪರಿಸ್ಥಿತಿಗೆ ಈ ಸರ್ಕಾರ ತಂದು ನಿಲ್ಲಿಸಿದೆ.
ಗ್ಯಾರಂಟಿ ಉಚಿತ, ಬೆಲೆ ಏರಿಕೆ ಖಚಿತ ಎಂಬ ಈ ನಿಲುವು ರಾಜ್ಯದ ಆರ್ಥಿಕ ವ್ಯವಸ್ತೆ ದಿಕ್ಕೆಟ್ಟಿರುವ ದ್ಯೋತಕವಾಗಿದೆ. ಈಗ ಹಾಲಿನ ದರ, ಮುಂದೆ ನೀರಿನ ದರ, ಆಮೇಲೆ ವಿದ್ಯುತ್ ದರ, ಬಹುಶಃ ಸೇವಿಸುವ ಗಾಳಿಗೂ ಬೆಲೆ ನಿಗದಿ ಪಡಿಸುವ ದಿನ ಬಹಳ ದೂರ ಇಲ್ಲ ಎಂದು ಹರಿಹಾಯ್ದಿದ್ದಾರೆ.