ನಾವೆಲ್ಲರೂ ಧರ್ಮ ಮಾರ್ಗದಲ್ಲಿ ಸಾಗೋಣ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಸ್ಲಿಂ ಬಾಂಧವರ ಶ್ರದ್ಧಾ ಭಕ್ತಿಯ ಹಬ್ಬವಾಗಿರುವ ರಂಜಾನ್ ಮಾಸಾಂತ್ಯದ ದಿನವಾದ ಸೋಮವಾರ ಮುಸ್ಲಿಂ ಬಂಧುಗಳು ಈದ್ ಉಲ್‌ಫಿತರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಪಟ್ಟಣದ ಮುಕ್ತಿಮಂದಿರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಮಾಜದ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು.

Advertisement

ಈದ್-ಉಲ್-ಫಿತರ್ ಹೆಸರಿನಿಂದ ಕರೆಯಲ್ಪಡುವ ರಂಜಾನ್ ಹಬ್ಬವು ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ಪವಿತ್ರ ರಂಜಾನ್ ಮಾಸದ ಅಂತ್ಯವನ್ನು ಸೂಚಿಸುತ್ತದೆ. ಪರಸ್ಪರ ಶುಭಾಶಯ ವಿನಿಮಯ ಮಾಡಿದ ಬಳಿಕ ವಿಶೇಷ ಖಾದ್ಯವನ್ನು ಸವಿದು ಹಬ್ಬವನ್ನು ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಈ ದಿನ ಬಡವರಿಗೆ ದಾನ-ಧರ್ಮವನ್ನು ಮಾಡುವುದು ಕೂಡಾ ಈ ಹಬ್ಬದ ವಿಶೇಷತೆಯಾಗಿದೆ. ಒಂದು ತಿಂಗಳ ಕಾಲ ನಡೆಸಿಕೊಂಡು ಬಂದ ರೋಜಾ ವೃತವನ್ನು ಮುಕ್ತಾಯಗೊಳಿಸಿದ ಮುಸ್ಲಿಂ ಬಂಧುಗಳು ಸೋಮವಾರ ಬೆಳಿಗ್ಗೆ ಹೊಸ ಬಟ್ಟೆ ಧರಿಸಿ ಮುಕ್ತಿಮಂದಿರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸೇರಿ ನಮಾಜ್ ಮಾಡಿದರು.

ಈ ವೇಳೆ ಮೌಲ್ವಿ ಹಾಫೀಜ್ ಮಹ್ಮದ ಶಕೀಲ್ ಮಾತನಾಡಿ, ರಂಜಾನ್ ತಿಂಗಳಲ್ಲಿ ಉಪವಾಸ ಮಾಡುವ ಮೂಲಕ ಅಲ್ಲಾನ ಸ್ಮರಣೆ ಮಾಡುವುದು ಮುಸ್ಲಿಂರ ಪವಿತ್ರ ಕರ್ತವ್ಯಗಳಲ್ಲಿ ಒಂದಾಗಿದೆ. ಧರ್ಮ ಮಾರ್ಗದಲ್ಲಿ ಸಾಗುವ ಮೂಲಕ ಅಲ್ಲಾನ ಕೃಪೆಗೆ ನಾವೆಲ್ಲ ಪಾತ್ರರಾಗೋಣ. ಬಡವರಿಗೆ, ಅಸಹಾಯಕರಿಗೆ, ದೀನರಿಗೆ ದಾನ ಧರ್ಮ ಕಾರ್ಯ ಮಾಡುವುದು, ಸಕಲರಿಗೆ ಲೇಸನ್ನೇ ಬಯಸುವುದು ಇಸ್ಲಾಂ ಧರ್ಮದ ತತ್ವವಾಗಿದೆ ಎಂದರು.

ಬೆಳಿಗ್ಗೆ ಈದ್ಗಾ ಮೈದಾನದಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ಜರುಗಿದ ಪ್ರಾರ್ಥನೆಯಲ್ಲಿ ಭಾಗವಹಿಸಿದ ಜನರು ಅಲ್ಲಾಹನನ್ನು ಸ್ಮರಿಸಿದರು. ಅಪಾರ ಸಂಖ್ಯೆ ಹಿರಿಯರು, ಯುವಕರು ಮತ್ತು ಮಕ್ಕಳು ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಗಮನ ಸೆಳೆದರು. ಅಂಜುಮನ್ ಎ-ಇಸ್ಲಾಂ ಕಮಿಟಿ, ದೂದನಾನಾ ದರ್ಗಾ ಕಮಿಟಿ ಹಾಗೂ ಇನ್ನಿತರೆ ಮುಸ್ಲಿಂ ಸಮಾಜದ ಕಮಿಟಿಗಳ ಮುಖ್ಯಸ್ಥರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here