ಕೋಲಾರ:- ತಾಲೂಕಿನ ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ ಕೊರಿಯರ್ ಪಾರ್ಸಲ್ ಕೊಡುವ ವಿಚಾರಕ್ಕೆ ಗಲಾಟೆ ನಡೆದು ಕೊರಿಯರ್ ಬಾಯ್ಗಳಿಂದ ಇಬ್ಬರಿಗೆ ಚಾಕು ಇರಿದಿರುವ ಘಟನೆ ಜರುಗಿದೆ.
Advertisement
ಪವನ್ ಮತ್ತು ಮೋಹನ್ ಎಂಬ ಕೊರಿಯರ್ ಬಾಯ್ಗಳು ಚೇತನ್ ಮತ್ತು ಯುವರಾಜ್ ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಫೋನ್ನಲ್ಲಿ ಕೊರಿಯರ್ ಬಾಯ್ ಪವನ್ ಮತ್ತು ಯುವಕರ ನಡುವೆ ವಾಗ್ವಾದ ನಡೆದಿದೆ. ಬಳಿಕ, ಕೊರಿಯರ್ ಬಾಯ್ ಪವನ್ ಮತ್ತು ಆತನ ಸಹೋದರ ಮೋಹನ್ ಗ್ರಾಮಕ್ಕೆ ನುಗ್ಗಿ ಚೇತನ್ ಮತ್ತು ಯುವರಾಜ್ಗೆ ಚಾಕುವಿನಿಂದ ಇರಿದಿದ್ದಾರೆ.
ಚಾಕು ಇರಿದು ಪರಾರಿಯಾಗುತ್ತಿದ್ದ ವೇಳೆ ಗ್ರಾಮಸ್ಥರು ಇಬ್ಬರೂ ಆರೋಪಿಗಳನ್ನು ಹಿಡಿದು, ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಸ್ಥಳಕ್ಕಾಗಮಿಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಕು ಇರಿದ ಮೋಹನ್ ಹಾಗೂ ಪವನ್ನನ್ನು ಬಂಧಿಸಲಾಗಿದೆ.