ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯಾವುದೇ ಒಂದು ಕಾರ್ಯದಲ್ಲಿ ತೊಡಗಿಸಿಕೊಂಡಾಗ ಅದರಲ್ಲಿ ಸಂಪೂರ್ಣವಾಗಿ ಸೇವಾ ಮನೋಭಾವನೆಯಿಂದ ಕೆಲಸ ನಿರ್ವಹಿಸಿದರೆ ಅಂತವರನ್ನು ಸಮಾಜ ಸದಾ ಗೌರವಿಸುತ್ತದೆ ಮತ್ತು ಸ್ಮರಿಸುತ್ತದೆ ಎಂದು ಯಜಮಾನ್ ಜಿ.ಎಫ್. ಉಪನಾಳ ಟ್ರಸ್ಟ್ ಶಾಂತಿಧಾಮ ವೃದ್ಧಾಶ್ರಮದ ಹಿರಿಯ ನಿರ್ದೇಶಕ ಶಂಕರಪ್ಪ ಗೊರವರ ಹೇಳಿದರು.
ಅವರು ಪಟ್ಟಣದ ಯಜಮಾನ್ ಜಿ.ಎಫ್. ಉಪನಾಳ ಟ್ರಸ್ಟ್ನ ಶಾಂತಿಧಾಮ ವೃದ್ಧಾಶ್ರಮದ ನಿಲಯ ಮೇಲ್ವಿಚಾರಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸುನೀತಾ ದುದ್ದಗಿ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೋಮೇಶ ಉಪನಾಳ, ಮಾಜಿ ಶಾಸಕರಾಗಿದ್ದ ದಿ.ಯಜಮಾನ್ ಗೂಳಪ್ಪ ಉಪನಾಳ ಅವರ ಸಮಾಜಮುಖಿ ಸೇವೆಯ ಒಂದು ಭಾಗವಾಗಿರುವ ಹಿರಿಯರಿಗೆ ಅನೂಕೂಲವಾಗುವ ವೃದ್ಧಾಶ್ರಮವನ್ನು ಸ್ಥಾಪಿಸಿ ಅನೇಕ ಹಿರಿಯ ಜೀವಿಗಳಿಗೆ ಆಶ್ರಯ ನೀಡುವಂತಾಗಿದೆ. ಇಲ್ಲಿರುವ ಫಲಾನುಭವಿಗಳು ಅನೇಕ ಕಷ್ಟ, ನೋವು, ಸಂಕಟಗಳನ್ನು ಮರೆತು ಇಲ್ಲಿ ನೆಮ್ಮದಿಯಿಂದ ಜೀವನ ಕಳೆಯುತ್ತಿದ್ದಾರೆ. ಇವರನ್ನು ಸಮಾನತೆಯಿಂದ ನಿಭಾಯಿಸಿಕೊಂಡು ಅವರ ಬೇಕು-ಬೇಡಗಳಿಗೆ ಸದಾ ಸ್ಪಂದಿಸುತ್ತಿದ್ದ ನಿಲಯ ಮೇಲ್ವಿಚಾರಕಿ ಸುನೀತಾ ಅವರ ಸೇವೆ ಶ್ಲಾಘನೀಯವಾಗಿದೆ. ಹಿರಿಯರ ಆಶೀರ್ವಾದದಿಂದ ಮುಂದಿನ ಅವರ ಜೀವನ ಒಳ್ಳೆಯ ದಾರಿಯಲ್ಲಿ ಸಾಗಲಿ ಎಂದು ಹಾರೈಸಿದರು.
ಸುನೀತಾ ದುದ್ದಗಿ ಮಾತನಾಡಿದರು. ಟ್ರಸ್ಟ್ನ ಕಾರ್ಯದರ್ಶಿ ಸೋಮೇಶ ಉಪನಾಳ ನವಲಗುಂದ ಶ್ರೀ ರೇಣುಕಾದೇವಿ ಗೋವಿನಜೋಳದ ಸಹಕಾರಿ ಸಂಸ್ಥೆಯ ಅಧ್ಯಕ್ಷರಾಗಿರುವದಕ್ಕೆ ಹಾಗೂ ಟ್ರಸ್ಟ್ನ ಖಜಾಂಚಿ ವೀರಯ್ಯ ಸಾಲಿಮಠ ಅವರು ಗದಗ ಜಿಲ್ಲಾ ಇಲೆಕ್ಟಿçಕಲ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ನಿಮಿತ್ತ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಪ್ರಕಾಶ ಉಪನಾಳ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ದಿಗಂಬರ ಪೂಜಾರ, ನಿರ್ದೇಶಕರಾದ ಎಸ್.ಎಸ್. ಬಾಳಿಹಳ್ಳಿಮಠ, ನಿರ್ಮಲಾ ಅರಳಿ, ನಂದಾ ಧರ್ಮಾಯತ್, ರಮೇಶ ಉಪನಾಳ ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಸುಮಾರು 5 ವರ್ಷಗಳಿಂದ ಶಾಂತಿಧಾಮ ವೃದ್ದಾಶ್ರಮದ ಹಿರಿಯರನ್ನು ಮನೆಯವರಂತೆ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದ ನಿಲಯ ಮೇಲ್ವಿಚಾರಕಿ ಸುನೀತಾ ಅವರನ್ನು ಬೀಳ್ಕೊಡುವ ನಿಟ್ಟಿನಲ್ಲಿ ಅಲ್ಲಿನ ಫಲಾನುಭವಿಗಳು ಮನೆಮಗಳನ್ನು ಕಳಿಸಿಕೊಡುವಂತೆ ಆತ್ಮೀಯವಾಗಿ ಬೀಳ್ಕೊಟ್ಟರು.


