ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸರಕಾರಿ ಕಾಲೇಜುಗಳು ಗ್ರಾಮೀಣ ವಿದ್ಯಾರ್ಥಿಗಳ ಜೀವನಾಡಿಯಾಗಿವೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಜೀವನಕ್ಕೆ ಅವಶ್ಯಕವಿರುವ ಮಾರ್ಗದರ್ಶನವನ್ನು ನೀಡುತ್ತಿರುವುದು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಕಾಲೆಜು ಶಿಕ್ಷಣ ಇಲಾಖೆಯ ಧಾರವಾಡ ಪ್ರಾದೇಶಿಕ ಕೇಂದ್ರದ ಜಂಟಿ ನಿರ್ದೇಶಕ ಪ್ರಕಾಶ ಹೊಸಮನಿ ಹೇಳಿದರು.
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರಕಾರಿ ಕಾಲೇಜಿಗೆ ಭೇಟಿ ನೀಡಿ ಪ್ರಾಧ್ಯಾಪಕರೊಂದಿಗೆ ಅವರು ಸಂವಾದ ನಡೆಸಿದರು.
ಸರಕಾರಿ ಕಾಲೇಜುಗಳಿಗೆ ಸಾಮಾನ್ಯವಾಗಿ ಕೂಲಿಕಾರರ ಮಕ್ಕಳು, ಆರ್ಥಿಕವಾಗಿ ಸಶಕ್ತರಲ್ಲದವರೇ ಹೆಚ್ಚಾಗಿ ಬರುತ್ತಾರೆ. ಅವರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿ ಅವರನ್ನು ಮುಖ್ಯ ವಾಹಿನಿಗೆ ತರುವುದು ಅವಶ್ಯಕವಾಗಿದೆ. ಅದಕ್ಕಾಗಿ ಎಲ್ಲ ಪ್ರಾಧ್ಯಾಪಕರೂ ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಳಜಿ ಮಾಡಬೇಕೆಂದು ಹೊಸಮನಿ ಹೇಳಿದರು.
ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಈ ಕಾಲೇಜು ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದನ್ನು ಸದಾವಕಾಲವೂ ಮುಂದುವರೆಸಿಕೊಂಡು ಹೋಗಬೇಕೆಂದರು. ಪ್ರತಿ ವಿಭಾಗದಲ್ಲಿಯೂ ಹೆಚ್ಚಿನ ಮಕ್ಕಳು ಪ್ರವೇಶ ಪಡೆಯುವಂತೆ ಮಾಡುವಲ್ಲಿ ಪ್ರಾಧ್ಯಾಪಕರ ಪಾತ್ರ ಮಹತ್ವದ್ದಿದೆ ಎಂದು ಹೊಸಮನಿ ತಿಳಿಸಿದರು.
ಕಾಲೇಜಿನ ಪ್ರಾಯೋಗಿಕ ತರಬೇತಿ ಹಾಗು ಕಚೇರಿ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಅನೇಕ ಸಲಹೆ, ಸೂಚನೆಗಳನ್ನು ನೀಡಿ ಎಲ್ಲರೂ ಕಾಲೇಜು ಅಭಿವೃದ್ಧಿಗಾಗಿ ಒಮ್ಮನದಿಂದ ಶ್ರಮಿಸಬೇಕೆಂದರು.
ಪ್ರಾಚಾರ್ಯ ಎಸ್.ಎಲ್. ಗುಳೇದಗುಡ್ಡ, ಶಿವಮೂರ್ತಿ ಕುರೇರ, ಸುನಂದಾ ಮುಂಜಿ, ಜಯಶ್ರೀ ಮುತಗಾರ, ಅಂಜನಮೂರ್ತಿ ಕೆ.ಎಚ್, ಅನಿಲಕುಮಾರ, ಶಶಿಕಲಾ ವಿ.ಎಸ್, ಕೆ.ಆರ್. ಪಾಟೀಲ, ನಸ್ರೀನಾಬಾನು ಜಮಾದಾರ, ವಿರೂಪಾಕ್ಷಪ್ಪ ಸಂಗನಾಳ, ಶಿವಪ್ಪ ಕುರುಬರ, ಅಯ್ಯಪ್ಪ, ವಿ.ಸಿ. ಇಲ್ಲೂರ, ಎಂ.ಎಫ್. ತಹಸೀಲ್ದಾರ, ಕೆ.ಎನ್. ಕಟ್ಟಿಮನಿ, ಕಿರಣ ರಂಜಣಗಿ, ಎನ್.ಎಸ್. ಹೊನ್ನೂರ, ಚಂದ್ರು ರಾಥೋಡ, ಬಸವರಾಜ ಮಡಿವಾಳರ, ಚಂದ್ರು ಸಂಶಿ, ಬಿ.ಕೆ. ಕಂಬಳಿ, ಪ್ರೇಮಾ ಕಾತ್ರಾಳ, ಶ್ವೇತಾ ಹುಣಸಿಮರದ, ಶಂಕರ ನರಗುಂದ, ಸಿದ್ದು ನವಲಗುಂದ, ಮಲ್ಲಪ್ಪ ಸಮಗಂಡಿ ಇನ್ನಿತರರಿದ್ದರು.