ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಷ್ಟ್ರದ ಸೇವೆಗಾಗಿ ಬದುಕನ್ನೇ ಮೀಸಲಿಟ್ಟ ಹಸಿರು ಕ್ರಾಂತಿ ಮತ್ತು ಸಮಾನತೆಯ ಹರಿಕಾರ, ಉಪ ಪ್ರಧಾನಮಂತ್ರಿಗಳಾಗಿದ್ದ ಡಾ. ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳು ಸದಾ ಸ್ಮರಣೀಯ. ಅವರ ಶ್ರೇಷ್ಠ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ತಿಳಿದು ಗೌರವದಿಂದ ಸ್ಮರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಶನಿವಾರ ಬಾಬು ಜಗಜೀವನರಾಂ ಅವರ 118ನೇ ಜನ್ಮದಿನಾಚರಣೆ/ಸಮತಾ ದಿನ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅವರು ದೇಶದ ಕಟ್ಟಕಡೆಯ ಸಮುದಾಯದ ಹಿತರಕ್ಷಣೆಗಾಗಿ ಶ್ರಮಿಸಿದವರು. ಕಾರ್ಮಿಕ ಸಚಿವರಾಗಿದ್ದಾಗ ದೇಶದ ಕಾರ್ಮಿಕರ ಕಾಯ್ದೆಗಳ ಶಿಲ್ಪಿ ಎಂಬ ಗೌರವಕ್ಕೆ ಪಾತ್ರರಾದರು. ಸಂಪರ್ಕ ಖಾತೆ ಸಚಿವರಾಗಿದ್ದ ವೇಳೆ ವಿಮಾನಯಾನ ರಾಷ್ಟ್ರೀಕರಣ, ಅಂಚೆ ಸೇವೆ ಬಲಿಷ್ಠಗೊಳಿಸಿದರು. ರೇಲ್ವೆ ಸಚಿವರಾಗಿದ್ದ ವೇಳೆ ರೇಲ್ವೆ ವಿದ್ಯುದ್ದೀಕರಣಗೊಳಿಸಿದರು. ಭಾರತ ಭೀಕರ ಬರಗಾಲಕ್ಕೆ ತುತ್ತಾದಾಗ ಕೃಷಿ ಸಚಿವರಾಗಿದ್ದ ಬಾಬೂಜಿ ದೇಶವು ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ವೈಜ್ಞಾನಿಕ ಕಾರ್ಯಕ್ರಮ ರೂಪಿಸಿ `ಹಸಿರು ಕ್ರಾಂತಿಯ ಹರಿಕಾರ’ರೆಂದು ಕರೆಸಿಕೊಂಡರು. ಅವರ ಜನ್ಮದಿನವನ್ನೀಗ ‘ಸಮತಾ ದಿನ’ವಾಗಿ ಆಚರಿಸಲಾಗುತ್ತಿದೆ ಎಂದರು.
ಈ ವೇಳೆ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲ ಲಮಾಣಿ, ಮುಖ್ಯಾಧಿಕಾರಿ ಮಹೇಶ ಹಡಪದ, ಜಿ.ಪಂ ಮಾಜಿ ಅಧ್ಯಕ್ಷ ಎಸ್.ಪಿ. ಬಳಿಗಾರ, ಹೆಸ್ಕಾಂ ಅಧಿಕಾರಿ ಆಂಜನಪ್ಪ, ಫಕ್ಕಿರೇಶ ಮ್ಯಾಟಣ್ಣವರ, ಅಮರೇಶ ತೆಂಬದಮನಿ, ರಾಜು ಓಲೇಕಾರ, ಅನಿಲ ಮುಳಗುಂದ, ನಾಗರಾಜ ದೊಡ್ಡಮನಿ, ಕೆ.ಓ. ಹುಲಿಕಟ್ಟಿ, ರಂಗಣ್ಣ ಬದಿ, ಸುರೇಶ ಬೀರಣ್ಣವರ, ಫಕ್ಕಿರೇಶ ಭಜಕ್ಕನವರ, ಜಗದೀಶ ಹುಲಿಗೆಮ್ಮನವರ, ಮಂಜುನಾಥ ರಾಮಗೇರಿ, ಟಾಕಪ್ಪ ಪೂಜಾರ, ಹಜರೇಸಾಬ ಅರ್ಕಸಾಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಇದ್ದರು.
ತಹಸೀಲ್ದಾರ ವಾಸುದೇವ ಸ್ವಾಮಿ ಮಾತನಾಡಿ, ಬಾಬು ಜಗಜೀವನ್ರಾಂ ಅವರು ತಮ್ಮ ಆಡಳಿತ ಅವಧಿಯಲ್ಲಿ ಮಾಡಿದ ದೇಶ ಸೇವೆ ಅವರನ್ನು ಸದಾ ಸ್ಮರಿಸುವಂತೆ ಮಾಡಿದೆ. ಇಂತಹ ಮಹಾನ್ ನಾಯಕರ ಜೀವನ ಸಾಧನೆ ಮತ್ತು ಆಡಳಿತ ವೈಖರಿ ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.