ಬೆಂಗಳೂರು :- ಬಿಜೆಪಿ ಅಸ್ತಿತ್ವಕ್ಕಾಗಿ ಜನಾಕ್ರೋಶ ಯಾತ್ರೆ ಮಾಡ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಯಾವ ಅಯೋಗ್ಯ ಇದನ್ನು ಹೇಳಿರೋದು? ನಮಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿಲ್ಲ. ಕಾಂಗ್ರೆಸ್ನವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ ನಮಗಲ್ಲ ಎಂದು ತಿರುಗೇಟು ನೀಡಿದರು.
ಭಾನುವಾರವಷ್ಟೇ ನಮ್ಮ ಪಕ್ಷದ ಸಂಸ್ಥಾಪನಾ ದಿನ ಮಾಡಿದ್ದೇವೆ. ವಿಶ್ವದ ಅತೀ ದೊಡ್ಡ ಪಕ್ಷ ಬಿಜೆಪಿ. ಕಾಂಗ್ರೆಸ್ಗೆ ಇವತ್ತು ಯಾವ ಪರಿಸ್ಥಿತಿ ಬಂದಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾವು ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿಲ್ಲ. ಚುನಾವಣೆಗಳು ಇಲ್ಲದಿದ್ದರೂ ಜನಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮದೇ ಆದ ಕೆಲ ತಪ್ಪುಗಳಿಂದ ನಾವು ಈ ಬಾರಿ ಅಧಿಕಾರಕ್ಕೆ ಬರದಿರಬಹುದು ಅಷ್ಟೇ. ಕಾಂಗ್ರೆಸ್ನವರ ಅನೇಕ ಹೋರಾಟ ಮಾಡಿದ್ದೇ ಚುನಾವಣೆಗಳು ಹತ್ತಿರ ಬಂದಾಗ. ಡಿಕೆಶಿ ಮೇಕೆದಾಟು ಪಾದಯಾತ್ರೆ ಮಾಡಿದ್ದು ಚುನಾವಣೆಗಾಗಿಯೇ ಎಂದು ಟಾಂಗ್ ನೀಡಿದರು.
ಇನ್ನೂ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದ ಕುರಿತು ಮಾತನಾಡಿ, ಪೊಲೀಸರು ಕ್ರೂರವಾಗಿ ನಡೆದುಕೊಂಡಿದ್ದಾರೆ. ಬೇಲ್ ಸಿಕ್ಕ ಮೇಲೂ ಪೊಲೀಸರು ವಿನಯ್ ಮನೆಗೆ ಹೋಗುತ್ತಾರೆ ಎಂದರೆ ಏನು ಹೇಳೋದು? ಈ ಪ್ರಕರಣ ಇಲ್ಲಿಗೇ ಬಿಡುವುದಿಲ್ಲ. ಕಾನೂನು ಹೋರಾಟ ಮಾಡ್ತೇವೆ ಎಂದರು.