ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣ ಸೇರಿ ತಾಲೂಕಿನ ಬಹುತೇಕ ಕಡೆ ಬುಧವಾರ ಸಂಜೆ ಸುರಿದ ಅಬ್ಬರದ ಗಾಳಿ-ಮಳೆ ಅನೇಕ ಆವಾಂತರಗಳನ್ನು ಸೃಷ್ಟಿಸಿದೆ. ಪಟ್ಟಣದಲ್ಲಿ ಚರಂಡಿಗಳು ತುಂಬಿ ರಸ್ತೆ ಮೇಲೆಯೇ ಹರಿದು ಅನೇಕ ಕಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸಮೀಪದ ಗೊಜನೂರ, ಅಕ್ಕಿಗುಂದ, ಬಟ್ಟೂರ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮುಂಗಾರು ಮಳೆ ಗುಡುಗು-ಸಿಡಿಲು ಆರ್ಭಟದೊಂದಿಗೆ ಜೋರಾಗಿ ಸುರಿದಿದ್ದು, ಅನೇಕ ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಮುರಿದು ಬಿದ್ದು ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ನೀರಾವರಿ ಶೇಂಗಾ ಬೆಳೆ ನೀರಿನಲ್ಲಿ ನಿಲ್ಲುವಂತಾಗಿದೆ. ಸಂಜೆ ಅಬ್ಬರಿಸಿದ ಮಳೆ-ಗಾಳಿಗೆ ಗೊಜನೂರ ಗ್ರಾಮದಲ್ಲಿ ರಮೇಶ ದನದಮನಿ ಅವರ ಮನೆ ಮುಂದೆ ಇದ್ದ ಸಿರಸಲ ಗಿಡ ಮುರಿದು ಲಕ್ಷ್ಮೇಶ್ವರ-ಗದಗ ರಸ್ತೆಯ ಮೇಲೆ ಬಿದ್ದಿದ್ದರಿಂದ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.
ಗ್ರಾಮದಲ್ಲಿನ ಆರೇಳು ಮನೆಗಳ ತಗಡು ಗಾಳಿಗೆ ಹಾರಿಬಿದ್ದಿದ್ದು, ಗ್ರಾಮದ ನಿರ್ಮಲಾ ಬಾಗವಾಡ ಅವರ ಮೇಲೆ ಶೆಡ್ ಕುಸಿದು ಬಿದ್ದು ಗಾಯಗೊಂಡಿದ್ದಾರೆ. ಮಳೆ ಅನಾಹುತಕ್ಕೆ ಗೊಜನೂರ ಗ್ರಾಮದಲ್ಲಿ ರಾಮಣ್ಣ ಪ್ರಧಾನಿ ಎಂಬುವವರ ದನದ ಕೊಟ್ಟಿಗೆಯ ತಗಡುಗಳು ಹಾರಿಹೋಗಿವೆ. ಮಳೆಯ ಅನಾಹುತಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಮಾಧಾನ ನೀಡಿದೆ.