ಬೆಂಗಳೂರು: ಕೆಲ ವ್ಯಕ್ತಿಗಳ ಕಿರುಕುಳಕ್ಕೆ ಬೇಸತ್ತು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ಪಟ್ಟಣದ ಎಸ್.ವಿ.ಎಂ ಸ್ಕೂಲ್ ಬಳಿ ನಡೆದಿದೆ. ಪ್ರವೀಣ್ ಗೌಡ ಬೇಲೂರು (35) ಮೃತ ದುರ್ಧೈವಿಯಾಗಿದ್ದು, ಫೇಸ್ಬುಕ್ ವಿಡಿಯೋ ಮಾಡಿ ಹಲವರ ಹೆಸರುಗಳನ್ನು ಪ್ರಸ್ತಾಪಿಸಿದ ಅವರು,
ಆ ನಂತರ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ತಮ್ಮ ಸಾವಿಗೆ ಇವರೇ ಕಾರಣ ಎಂದು ಹಲವರನ್ನು ಹೆಸರಿಸಿರುವ ಅವರು, ಆ ಪೈಕಿ ಕಿರಣ್ ಎಂಬಾತನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಕಳೆದ ಎರಡು ತಿಂಗಳಿನಿಂದ ಮಾನಸಿಕವಾಗಿ ನೊಂದಿದ್ದೇನೆ. ನನ್ನ ಸಾವಿಗೆ ಕೆಲವರು ನೇರ ಕಾರಣರಾಗಿದ್ದಾರೆ. ಸಮಂದರ್ ಕಿರಣ್, ಗೋಕುಲ್ ಫ್ಯಾಷನ್ ಹರೀಶ್, ಭಾಸ್ಕರ್ ನಾರಾಯಣಪ್ಪ, ದೊಡ್ಡಹಾಗಡೆ ಮಧುಗೌಡ ಜೊತೆಗೆ ಸರವಣ ಇವರೆಲ್ಲಾ ನನ್ನ ಸಾವಿಗೆ ಕಾರಣಕರ್ತರು ಎಂದು ವೀಡಿಯೋದಲ್ಲಿ ಆರೋಪಿಸಿದ್ದಾರೆ.
ಪೊಲೀಸರು, ಯಾರನ್ನೂ ಬಿಟ್ಟರೂ ಕಿರಣ್ ಗೌಡನನ್ನು ದಯವಿಟ್ಟು ಬಿಡಬೇಡಿ. ಕಿರಣ್ ತುಂಬಾ ಹೆಣ್ಣುಮಕ್ಕಳಿಗೆ ಫೋನ್ ಮಾಡಿ ಟಾರ್ಚರ್ ಕೊಡುತ್ತಾನೆ. ಇವನು ಮಾಡಿರುವ ಇಂತಹ ಕೆಲಸಗಳೆಲ್ಲಾ ನನ್ನ ಮೇಲೆ ಬಂದಿದೆ ಎಂದಿದ್ದಾರೆ.
ಹಣದ ಮಾತುಕತೆಗೆ ಕರೆದು ಹಲ್ಲೆ ನಡೆಸಿರುವ ಬಗ್ಗೆಯೂ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಆನೇಕಲ್ ಬಿಜೆಪಿ ಮಂಡಲದ ಅಧ್ಯಕ್ಷ ನಾಯನಹಳ್ಳಿ ಮುನಿರಾಜು ಗೌಡ ಅವರು ಹಣದ ಮಾತುಕತೆಗೆ ಮನೆ ಕರೆದಿದ್ದರು. ಆ ವೇಳೆ ಅಲ್ಲಿ ಆನೇಕಲ್ ಕೌನ್ಸಿಲರ್ ಭಾಗ್ಯಮ್ಮ ಮತ್ತು ಅವರ ಪತಿ ಶ್ರೀನಿವಾಸ್ ಸಹ ಇದ್ದರು. ಭಾಗ್ಯಮ್ಮ ಶ್ರೀನಿವಾಸ್ ಏಕಾಏಕಿ ಹತ್ತಾರು ಮಂದಿಯನ್ನ ಕರೆಸಿ, ಮೊಬೈಲ್ ಕಿತ್ತುಕೊಂಡು 2 ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.