ಚಿಕ್ಕಬಳ್ಳಾಪುರ:- ಭೀಕರ ರಸ್ತೆ ಅಪಘಾತದಲ್ಲಿ ತಂದೆ-ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮರಸನಹಳ್ಳಿ ಬಳಿ ಜರುಗಿದೆ. ತಂದೆ ವೆಂಕಟೇಶ್, 4 ವರ್ಷದ ಮಗಳು ದೀಕ್ಷಿತಾ ಮೃತರು. ಮೃತ ವೆಂಕಟೇಶ್ ಪತ್ನಿ ರೂಪಾ ಸ್ಥಿತಿ ಚಿಂತಾಜನಕವಾಗಿದೆ. ಕುಟುಂಬ ಬಂಡಹಳ್ಳಿಯಿಂದ ನಾಯನಹಳ್ಳಿಗೆ ಹೊರಟಿದ್ದಾಗ ದುರ್ಘಟನೆ ಸಂಭವಿಸಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಲಿಂಗಶೆಟ್ಟಪುರ ಗೇಟ್ ಬಳಿಯ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಗೇಪಲ್ಲಿ ಕಡೆಯಿಂದ ಬೆಂಗಳೂರು ಕಡೆಗೆ ಬೈಕ್ ಬರುತ್ತಿತ್ತು.
ಬೈಕ್ ಪಕ್ಕದಲ್ಲಿ ಕಂಟೇನರ್ ಸಹ ಬರುತ್ತಿತ್ತು. ಆದರೆ, ಲಿಂಗಶೆಟ್ಟಪುರ ಗೇಟ್ ಬಳಿ ಈಶಾ ಪೌಂಡೇಷನ್ ಕಡೆಯಿಂದ ಬಂದ ಕಾರೊಂದು ರಭಸವಾಗಿ ಹೆದ್ದಾರಿಗೆ ಬಂದಿದೆ. ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಂಟೇನರ್ ಚಾಲಕ ಸಡನ್ ಆಗಿ ಬ್ರೇಕ್ ತುಳಿದು, ಕಂಟೇನರ್ ಅನ್ನು ಎಡಕ್ಕೆ ಎಳೆದಿದ್ದಾರೆ. ಕಂಟೇನರ್ ಪಕ್ಕದಲ್ಲೇ ಚಲಿಸುತ್ತಿದ್ದ ಬೈಕ್ ಸವಾರರ ಮೇಲೆ ಬಿದ್ದಿದೆ. ಬೈಕ್ ಮೇಲೆ ಕಂಟೇನರ್ ಬಿದ್ದ ರಭಸಕ್ಕೆ ವೆಂಕಟೇಶ, ಅವರ ಪತ್ನಿ ರೂಪಾ ಮತ್ತು ಮಗಳು ದೀಕ್ಷಿತಾ ಕಂಟೇನರ್ ಕೆಳಗೆ ಸಿಲುಕಿದ್ದಾರೆ. ವೆಂಕಟೇಶ್ ಹಾಗೂ ದೀಕ್ಷಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೆಂಕಟೇಶ್ ಪತ್ನಿ ರೂಪಾ ಕಾಲುಗಳನ್ನು ಕಳೆದುಕೊಂಡಿದ್ದು, ಸಾವು ಬದುಕಿನ ಮದ್ಯ ಹೋರಾಟ ನಡೆಸುತ್ತಿದ್ದಾರೆ.