ಸಮಾನತೆ ಮಂದಿರದ ಕಲ್ಪನೆ ಅದ್ಭುತ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ದೇಶದಲ್ಲೇ ಪ್ರಥಮ ಬಾರಿಗೆ `ಸಮಾನತೆ ಮಂದಿರ’ ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ಸ್ಥಾಪನೆ ಆಗುತ್ತಿರುವುದು ಜಿಲ್ಲೆಯ ಜನರು ಹೆಮ್ಮೆ ಪಡುವ ವಿಷಯವಾಗಿದೆ. ಯುವ ಮುಖಂಡ ಅನಿಲ ಪಿ.ಮೆಣಸಿನಕಾಯಿ ಹೊಸ-ಹೊಸ ಆವಿಷ್ಕಾರದ ವಿಷಯ ಹುಡುಕುವಲ್ಲಿ ನಿಪುಣರಾಗಿದ್ದಾರೆ. ಸಮಾನತೆ ಮಂದಿರ ನಿರ್ಮಿಸುವ ಕಲ್ಪನೆ ಅವರಲ್ಲಿ ಬಂದಿದ್ದು ಅದ್ಭುತ ಅನುಭವವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟರು.

Advertisement

ದೇಶದಲ್ಲಿ ಅಸಮಾನತೆಯನ್ನು ಹೋಗಲಾಡಿಸುವ ಉದ್ದೇಶದಿಂದ `ಮಾನವ ಕುಲಕ್ಕೆ ಜಯವಾಗಲಿ’ ಎನ್ನುವ ಧ್ಯೇಯದೊಂದಿಗೆ ಯುವ ಮುಖಂಡ ಅನಿಲ ಪಿ.ಮೆಣಸಿನಕಾಯಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಸಮಾನತೆ ರಥಯಾತ್ರೆ, ಸಮಾನತೆ ಬುತ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಸಮಾಜಕ್ಕೆ ವಿಶೇಷ ಸೇವೆ ಸಲ್ಲಿಸಬೇಕು ಎನ್ನುವ ಕಿಚ್ಚು ಅನಿಲ ಮೆಣಸಿನಕಾಯಿ ಅವರಲ್ಲಿ ಅಡಗಿದೆ. ಚುನಾವಣೆಯಲ್ಲಿ ಅವರು ಪರಾಭವಗೊಂಡರೂ ಎದೆಗುಂದದೇ ಸಮಾನತೆ ಮಂದಿರ ನಿರ್ಮಿಸುವ ಸಂಕಲ್ಪದೊಂದಿಗೆ ಮತ್ತೊಮ್ಮೆ ಜನ-ಮನದಲ್ಲಿ ಅಚ್ಚಳಿಯದೇ ಉಳಿಯುವ ಕೆಲಸ ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಕರ್ನಾಟಕದಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಾವೆಲ್ಲರೂ ಅವರ ಜೊತೆಗಿದ್ದೇವೆ ಎಂದು ಭರವಸೆ ನೀಡಿದರು.

ಈ ವೇಳೆ ಮಾಜಿ ಸಚಿವ, ನರಗುಂದ ಮತಕ್ಷೇತ್ರದ ಶಾಸಕ ಸಿ.ಸಿ ಪಾಟೀಲ, ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ. ಚಂದ್ರು ಲಮಾಣಿ, ವಿ.ಪ ಸದಸ್ಯ ಎಸ್.ವ್ಹಿ. ಸಂಕನೂರ, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ, ಸಿದ್ದಣ್ಣ ಪಲ್ಲೇದ, ಸಂಗಮೇಶ ದುಂದೂರ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ನಗರಸಭೆ ಸದಸ್ಯ ರಾಘವೇಂದ್ರ ಯಳವತ್ತಿ, ಎಂ.ಎಂ. ಹಿರೇಮಠ, ರವಿಕಾಂತ ಅಂಗಡಿ, ಪರಮೇಶ ನಾಯಕ, ಉಮೇಶ ಹಡಪದ, ನಗರಸಭೆ ಮಾಜಿ ಅಧ್ಯಕ್ಷ ಶಿವಣ್ಣ ಮುಳಗುಂದ, ಉಡಚಪ್ಪ ಹಳ್ಳಿಕೇರಿ, ವಿನಾಯಕ ಮಾನ್ವಿ, ಅಯ್ಯಪ್ಪ ಅಂಗಡಿ, ರುದ್ರಣ್ಣ ಗುಳಗುಳಿ, ನಿರ್ಮಲಾ ಕೊಳ್ಳಿ, ಶ್ವೇತಾ ದಂಡಿನ, ವಿಜಯಲಕ್ಷ್ಮೀ ದಿಂಡೂರ, ವಿಜಯಲಕ್ಷ್ಮೀ ಮಾನ್ವಿ, ಸ್ವಾತಿ ಅಕ್ಕಿ, ಶಾರದಾ ಹಿರೇಮಠ, ಅನಿಲ ಅಬ್ಬಿಗೇರಿ, ಕಿಸನ್ ಮೇರವಾಡೆ, ಮುತ್ತಣ್ಣ ಮುಶಿಗೇರಿ, ಪ್ರಕಾಶ ಅಂಗಡಿ, ವಸಂತ ಪಡಗದ ಮುಂತಾದವರು ಪಾಲ್ಗೊಂಡಿದ್ದರು.

“ಬುದ್ಧ, ಬಸವ, ಅಂಬೇಡ್ಕರ್, ಶರೀಫಜ್ಜ, ಶ್ರೀರಾಮ, ಮಹರ್ಷಿ ವಾಲ್ಮೀಕಿ, ಭಕ್ತ ಕನಕದಾಸರು ಸೇರಿದಂತೆ ಹಲವಾರು ದಾರ್ಶನಿಕರು ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸುವಲ್ಲಿ ಶ್ರಮ ವಹಿಸಿದ್ದರು. ಆದರೆ, ಅಸಮಾನತೆ ಇನ್ನೂ ತಾಂಡವವಾಡುತ್ತಿದೆ. ಇದನ್ನು ಹೋಗಲಾಡಿಸಲು ಸಮಾನತೆ ಮಂದಿರ ನಿರ್ಮಿಸಲು ಪಣ ತೊಡಲಾಗಿದೆ. ಈ ವಿಶೇಷ ಕಾರ್ಯಕ್ಕೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲ ನಾಯಕರು ಸಹಕಾರ ನೀಡುತ್ತಿದ್ದಾರೆ”

ಅನಿಲ ಪಿ.ಮೆಣಸಿನಕಾಯಿ.

ಸಮಾನತೆ ಮಂದಿರದ ರೂವಾರಿ.


Spread the love

LEAVE A REPLY

Please enter your comment!
Please enter your name here