ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಜೀವಿತಾವಧಿಯಲ್ಲಿ ಯಾವ ವ್ಯಕ್ತಿ ನಿಸ್ವಾರ್ಥ, ಪರಹಿತ ಚಿಂತನೆ, ಸಮಾಜಮುಖಿ ಕಾರ್ಯ, ಸನ್ಮಾರ್ಗದಲ್ಲಿ ಬಾಳುತ್ತಾನೆ. ಆ ವ್ಯಕ್ತಿ ಸಮಾಜಕ್ಕೆ ಮಾದರಿ ಹಾಗೂ ಸ್ಮರಣೀಯರಾಗಿರುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಧರ್ಮಾಭಿಮಾನಿಯಾಗಿದ್ದ ಮಾಜಿ ಶಾಸಕ ಮತ್ತು ಶ್ರೀ ಸೋಮೇಶ್ವರ ನೂಲಿನ ಗಿರಣಿ ಸಂಸ್ಥಾಪಕರಾಗಿದ್ದ ದಿ. ಗೂಳಪ್ಪ ಉಪನಾಳ ಮೇಲ್ಪಂಕ್ತಿಗೆ ಸೇರುತ್ತಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಸೋಮವಾರ ಪಟ್ಟಣದ ಸೋಮೇಶ್ವರ ಸ್ಪಿನ್ನಿಂಗ್ ಮಿಲ್ನ ಆವರಣದಲ್ಲಿ ದಿ. ಗೂಳಪ್ಪ ಉಪನಾಳ ಅವರ 27ನೇ ಪುಣ್ಯಸ್ಮರಣೆ ನಿಮಿತ್ತ ದಿ. ಗೂಳಪ್ಪ ಉಪನಾಳ ಅವರ ಶಿಲಾಮೂರ್ತಿಗೆ ಶೃದ್ಧಾಂಜಲಿ ಸಲ್ಲಿಸಿ ಮಾತನಾಡುತ್ತಿದ್ದರು.
ಲಕ್ಷ್ಮೇಶ್ವರದಲ್ಲಿ ಸಹಕಾರಿ ನೂಲಿನ ಗಿರಣಿ ಸ್ಥಾಪಿಸುವ ಮೂಲಕ ಸಾವಿರಾರು ಬಡ ಮತ್ತು ಅಂಗವಿಕಲರಿಗೆ ಉದ್ಯೋಗ ನೀಡಿ ಬದುಕು ಕಲ್ಪಿಸಿದ ಶ್ರೇಯಸ್ಸು ಅವರದ್ದಾಗಿದೆ. ಸರಳ, ಸಜ್ಜನ, ಸಂಪನ್ನ ವ್ಯಕ್ತಿತ್ವವುಳ್ಳ ಅವರು ಬಡವ, ದೀನ-ದಲಿತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಮೂಲಕ `ಯಜಮಾನ’ ಎಂದೇ ಹೆಸರಾಗಿದ್ದರು. ಲಿಂ. ವೀರಗಂಗಾಧರ ಜಗದ್ಗುರುಗಳ ಪ್ರೀತಿಗೆ ಪಾತ್ರರಾಗುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ವಿಶೇಷ ಕಾರ್ಯಯೋಜನೆ ಸಾಕಾರದ ಜತೆಗೆ ಸೈದ್ಧಾಂತಿಕ, ಬದ್ಧತೆಯ ರಾಜಕಾರಣಕ್ಕೆ ಹೆಸರಾದ ಅವರು ಇತರರಿಗೂ ಪ್ರೇರಣೆಯಾಗಿದ್ದಾರೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಡಾ. ಪೂಜಾ ಪುಲಕೇಶಿ ಉಪನಾಳ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ರಾಮಣ್ಣ ಲಮಾಣಿ, ಶ್ರೀ ಸೋಮೇಶ್ವರ ನೂಲಿನ ಗಿರಣಿಯ ಆಡಳಿತ ಮಂಡಳಿ ಅಧ್ಯಕ್ಷ ಪುಲಕೇಶಿ ಉಪನಾಳ, ನಿರ್ದೇಶಕರಾದ ಎಸ್.ಪಿ. ಬಳಿಗಾರ, ಜಿ.ಬಿ. ಮೆಣಸಿನಕಾಯಿ, ಎಂ.ಕೆ. ಕಳ್ಳಿಮಠ, ಸಿ.ಕೆ. ಗುಂಜಳ, ಎನ್.ಸಿ. ಧರ್ಮಾಯತ, ರೇವತಿ ಉಪನಾಳ, ನಿರ್ಮಲಾ ಅರಳಿ, ಎಂ.ಎಚ್. ಗುಡಾರದ, ಟಿ.ಎನ್. ಗಿಡಿಬಿಡಿ, ಎಂ.ಎನ್. ರಗಡಿ, ಬಿ.ಎಫ್. ಮುದಿಮಲ್ಲನವರ, ಪ್ರಕಾಶ ಉಪನಾಳ, ವ್ಯವಸ್ಥಾಪಕ ನಿರ್ದೇಶಕ ಹೆಚ್.ಬಿ. ಪಾಟೀಲ ಸೇರಿದಂತೆ ನೂಲಿನ ಗಿರಣಿ ಸದಸ್ಯರು, ಹಿರಿಯರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.