ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ 15ನೇ ಹಣಕಾಸಿನ 76 ಲಕ್ಷ ರೂ ಅನುದಾನಲ್ಲಿ ಪಟ್ಟಣದ ಮುಖ್ಯ ಬಜಾರ್ ರಸ್ತೆಯ ಗ್ರಾಮ ಚಾವಡಿಯಿಂದ ಭರಮದೇವರ ಸರ್ಕಲ್ವರೆಗಿನ 260 ಮೀಟರ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಗುರುವಾರ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ವ್ಯವಹಾರಿಕ, ಶೈಕ್ಷಣಿಕವಾಗಿ ತೀವೃಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣದಲ್ಲಿನ ರಸ್ತೆಗಳು ಸಾಕಷ್ಟು ಹದಗಟ್ಟಿವೆ. ಇವುಗಳ ಅಭಿವೃದ್ಧಿಗೆ ವಿಶೇಷ ಅನುದಾನದ ಅಗತ್ಯವಿದೆ. ಮುಖ್ಯ ಬಜಾರ್ ರಸ್ತೆ ಶಿಗ್ಲಿ ನಾಕಾದಿಂದ ಗ್ರಾಮ ಚಾವಡಿವರೆಗೆ ಮಾತ್ರ ಅಭಿವೃದ್ಧಿ ಹೊಂದಿ ದೂದಪೀರಾಂ ದರ್ಗಾವರೆಗೆ ಹದಗೆಟ್ಟಿತ್ತು. ಇದರಿಂದ ಹಳ್ಳಿಗಳಿಂದ ಬಜಾರಕ್ಕೆ ಬರುವ ಸಾರ್ವಜನಿಕರಿಗೆ ಹಾಗೂ ದೂದನಾನಾ ದರ್ಗಾಕ್ಕೆ ಬರುವ ಭಕ್ತರ ಸಂಚಾರಕ್ಕೆ ಸಾಕಷ್ಟು ತೊಂದರೆಯಾಗಿತ್ತು. ಕೆಂಚಲಾಪುರ ಓಣಿಯವರೆಗೆ ರಸ್ತೆ ಅಭಿವೃದ್ಧಿಯನ್ನು ಅಲ್ಪಸಂಖ್ಯಾತರ ಇಲಾಖೆಯಿಂದ ಬಂದ 2 ಕೋಟಿ ರೂ ಅನುದಾನದಲ್ಲಿ ಆದಷ್ಟು ಬೇಗ ಪ್ರಾರಂಭಿಸಲಾಗುವುದು ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಫಿರ್ದೋಶ್ ಆಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ, ಸದಸ್ಯರಾದ ಪ್ರವೀಣ ಬಾಳಿಕಾಯಿ, ರಾಜೀವ ಕುಂಬಿ, ಬಸವರಾಜ ಓದುನವರ, ರಮೇಶ ಗಡದವರ, ಮಹಾದೇವಪ್ಪ ಅಣ್ಣಿಗೇರಿ, ರಮೇಶ ಗಡದವರ, ಜಯಕ್ಕ ಕಳ್ಳಿ, ಅಶ್ವಿನಿ ಅಂಕಲಕೋಟಿ, ವಾಣಿ ಹತ್ತಿ, ಕಿರಣ ನವಲೆ, ಎಸ್.ಕೆ. ಹವಾಲ್ದಾರ, ಎಂ.ಆರ್. ಪಾಟೀಲ, ಅನಿಲ ಮುಳುಗುಂದ, ಫಕ್ಕೀರೇಶ ನಂದೆಣ್ಣವರ, ಅಮರೀಶ ತೆಂಬದಮನಿ, ಗಿರೀಶ ಚೌರಡ್ಡಿ, ಪ್ರಕಾಶ ಮಾದನೂರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಅರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಇಂಜಿನಿಯರ್ ವೀರೇಂದ್ರಸಿಂಗ್ ಕಾಟೆವಾಲೆ, ಹನುಮಂತಪ್ಪ ನಂದೆಣ್ಣವರ ಸೇರಿ ಅನೇಕರಿದ್ದರು.