ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಬಾಲಕೃಷ್ಣ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಕಲಾವಿದ ಅನಂತ ದೇಶಪಾಂಡೆ 2025ರ ಬಾಲಕೃಷ್ಣ ಸಾಹಿತ್ಯ ಪುರಸ್ಕಾರ ಪಡೆದರು. ನಂತರ ಅವರು ನೀಡಿದ ಬೇಂದ್ರೆ ದರ್ಶನ ಕಾರ್ಯಕ್ರಮ ನೆರೆದವರ ಮನವನ್ನು ಸೂರೆಗೊಂಡಿತು.
ಬೇಂದ್ರೆಯವರಂತೆಯೆ ವೇಷಭೂಷಣ ತೊಟ್ಟು ದೇಶಪಾಂಡೆ ಸಭಾಂಗಣಕ್ಕೆ ಆಗಮಿಸಿದಾಗ ನೆರೆದವರು ಆನಂದದಿಂದ ಚಪ್ಪಾಳೆ ತಟ್ಟಿದರು. ಬೇಂದ್ರೆಯವರ ಹಾವ-ಭಾವ, ನಡೆ-ನುಡಿಗಳನ್ನು ತಮ್ಮ ಭಾಷಣದುದ್ದಕ್ಕೂ ಪ್ರದರ್ಶಿಸಿದ ದೇಶಪಾಂಡೆ ಸ್ವತಃ ಬೇಂದ್ರೆಯವರೇ ತಮ್ಮೆದುರಿಗೆ ಬಂದು ನಿಂತಿದ್ದಾರೇನೋ ಎನ್ನುವಂತಹ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾದರು.
ಬೇಂದ್ರೆಗೆ ನಾಲ್ಕು ಮುಖಗಳಿದ್ದವು. ಕವಿ ಬೇಂದ್ರೆ, ವಿಮರ್ಶಕ ಬೇಂದ್ರೆ, ಮಾಸ್ತರ ಬೇಂದ್ರೆ ಮತ್ತು ಗೃಹಸ್ಥ ಬೇಂದ್ರೆ. ಈ ಎಲ್ಲದರಲ್ಲಿಯೂ ಬೇಂದ್ರೆ ತಮ್ಮ ಛಾಪನ್ನು ಮೂಡಿಸಿ ತಮ್ಮ ಜೀವನವನ್ನು ಹೇಗೆ ಸಾರ್ಥಕಪಡಿಸಿಕೊಂಡರು ಎಂಬುದನ್ನು ದೇಶಪಾಂಡೆ ತಮ್ಮ ಅಭಿನಯದ ಮೂಲಕ ಅಭಿನಯಿಸಿ ಎಲ್ಲರ ಮನ ಗೆದ್ದರು. ಗದಗಿನ ವಿದ್ಯಾದಾನ ಸಮಿತಿಗೆ ತಾವು ಮಾಸ್ತರರಾಗಿ ಬಂದ ಅನುಭವವನ್ನು, ತಮ್ಮ ಕವಿತೆಗಳು ಅರಳಿದ ವಿಷಯವನ್ನು ಅವರು ನಿರೂಪಿಸಿದರು.
ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ತಾವು ಓದಿದ ಕವಿತೆ `ಹಕ್ಕಿ ಹಾರುತಿದೆ ನೋಡಿದಿರಾ’ ಗೀತೆಯನ್ನು ರಾಗಬದ್ಧವಾಗಿ ಹಾಡಿದರು. ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳನ್ನೊಳಗೊಂಡಂತೆ ವೇದಿಕೆಯ ಮೇಲಿನ ಗಣ್ಯರು, ನೂರಾರು ಸಾಹಿತ್ಯಾಸಕ್ತರು ಪಾಲ್ಗೊಂಡು ಬೇಂದ್ರೆ ದರ್ಶನದ ಸವಿಯನ್ನು ಸವಿದರು.