ವಿಜಯಸಾಕ್ಷಿ ಸುದ್ದಿ, ಗದಗ: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರಗಾಮಿಗಳು ನಡೆಸಿದ ಹೇಯ ಕೃತ್ಯದಲ್ಲಿ ಸಾವನ್ನಪ್ಪಿದ ನಾಗರಿಕರಿಗೆ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮೇಣದಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ನೇತೃತ್ವದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೂರಾರು ಕಾರ್ಯಕರ್ತರು ಮೇಣದ ಬತ್ತಿ ಹಚ್ಚಿ ಮೌನಾಚರಣೆಯ ಮೂಲಕ ಭಯೋತ್ಪಾದಕರ ಗುಂಡಿಗೆ ಬಲಿಯಾದ ಪ್ರವಾಸಿಗರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ತಾ.ಪಂ ಮಾಜಿ ಸದಸ್ಯ ವಿದ್ಯಾಧರ ದೊಡ್ಡಮನಿ ಮಾತನಾಡಿದರು. ನಗರಸಭೆ ಮಾಜಿ ಅಧ್ಯಕ್ಷ ಸುರೇಶ ಕಟ್ಟಿಮನಿ, ಮುಖಂಡರಾದ ಬಸವರಾಜ ಕಡೆಮನಿ, ಎಸ್.ಎನ್. ಬಳ್ಳಾರಿ, ಷರೀಫ್ ಬಿಳೆಯಲಿ, ಬಾಷಾಸಾಬ ಮಲ್ಲಸಮುದ್ರ, ಸಯ್ಯದಖಾಲಿದ ಕೊಪ್ಪಳ, ಅನಿಲ ಗರಗ, ಲಕ್ಷ್ಮಣ ಭಜಂತ್ರಿ, ಸರ್ಫರಾಜ್ ಬಬರ್ಚಿ, ಎಂ.ಸಿ. ಶೇಖ್, ಡಿ.ಬಿ. ಮೂರ್ನಾಳ, ಮಂಜುನಾಥ ಪೂಜಾರ, ಮಹಮ್ಮದ ಶಾಲಗಾರ, ಉಮರಫಾರೂಖ್ ಹುಬ್ಬಳ್ಳಿ, ಮೋಹನ ಚಂದಪ್ಪನವರ, ಮಾರ್ತಾಂಡಪ್ಪ ಹಾದಿಮನಿ, ಡಿ.ಬಿ. ಜೋಗಣ್ಣವರ, ವಸಂತ ಸಿದ್ದಮನಹಳ್ಳಿ, ಚಿಮ್ಮಿ ನದಾಫ್, ಫರ್ವೀನಬಾನು ಮುಲ್ಲಾ, ಕಮಲಾಬಾಯಿ ಹಾದಿಮನಿ, ದ್ರಾಕ್ಷಾಯಿಣಿ ಹಾಸಿಲಕರ, ಮಹಾಂತೇಶ ಮಡಿವಾಳರ, ಉಮರಫಾರೂಖ್ ಬಾರಿಗಿಡದ, ಮೋಹನ ಕಟ್ಟಿಮನಿ, ಅಬ್ದುಲಮುನಾಫ ಮುಲ್ಲಾ, ಪರಪ್ಪ ಕಮತರ, ರಾಘವೇಂದ್ರ ದೊಡ್ಡಮನಿ, ದಯಾನಂದ ಪವಾರ, ಚಾಂದಸಾಬ ಕೊಟ್ಟೂರ, ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ ಘಟನೆಯು ಅತ್ಯಂತ ಹೇಯ ಕೃತ್ಯವಾಗಿದ್ದು, ಮಾನವೀಯತೆಯ ಕಗ್ಗೊಲೆಯಾದಂತಿದೆ. ಎಲ್ಲ ಜಾತಿ, ಧರ್ಮದವರು ಒಗ್ಗಟ್ಟಾಗಿರುವ ನಮ್ಮ ಭಾರತ ದೇಶದಲ್ಲಿ ವಿಭಜನೆ ಆಗಬೇಕು ಎಂಬ ಹುನ್ನಾರವನ್ನು ಇಟ್ಟುಕೊಂಡು ಮಾಡಿರುವ ಭಯೋತ್ಪಾದಕರ ದಾಳಿಯನ್ನು ನಾವೆಲ್ಲರೂ ಏಕತೆಯಿಂದ, ಒಗ್ಗಟ್ಟಿನಿಂದ ಖಂಡಿಸಬೇಕು ಎಂದು ಹೇಳಿದರು.