ವಿಜಯಸಾಕ್ಷಿ ಸುದ್ದಿ, ರೋಣ: ಸವಡಿ ಗ್ರಾಮದಲ್ಲಿ ಎಪ್ರಿಲ್ 24ರಂದು ಸಿಡಿಲು ಬಡಿದು ಸಾನ್ನಪ್ಪಿದ ಯುವಕ ಕೋಟೇಶ ಶಿವಪ್ಪ ನರೆಗಲ್ಲ (25) ಕುಟುಂಬದವರನ್ನು ಸೋಮವಾರ ಭೇಟಿಯಾದ ಶಾಸಕ ಜಿ.ಎಸ್. ಪಾಟೀಲ, ಕುಟುಂಬಸ್ಥರಿಗೆ ಧೈರ್ಯ ಹೇಳಿ, ಮೃತ ಯುವಕನ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ.ಗಳ ಪರಿಹಾರದ ಆದೇಶ ಪ್ರತಿಯನ್ನು ಹಸ್ತಾಂತರಿಸಿದರು.
ಮೃತ ಯುವಕನ ತಾಯಿಯೂ ಕೆಲ ತಿಂಗಳುಗಳ ಹಿಂದೆ ಮೃತರಾಗಿದ್ದು, ಈಗ ಕುಟುಂಬಕ್ಕೆ ಆಸರೆಯಾಗಿದ್ದ ಮಗನನ್ನೂ ಕಳೆದುಕೊಂಡ ತಂದೆಯ ದುಃಖ ನೆರೆ-ಹೊರೆಯವರಲ್ಲಿ ಕಣ್ಣೀರು ತರಿಸಿತ್ತು.
ಮನೆ ಮಗನ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಸರಕಾರದಿಂದ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗಿದ್ದು, ಜೊತೆಗೆ ಕುಟುಂಬಸ್ಥರ ಕಷ್ಟ-ಸುಖಗಳಲ್ಲಿ ತಾವೂ ಇರುವುದಾಗಿ ತಿಳಿಸಿದರಲ್ಲದೆ, ತಂದೆಯನ್ನು ಜೋಪಾನ ಮಾಡಿ ಎಲ್ಲದಕ್ಕೂ ದೇವರಿದ್ದಾನೆ ಎಂದು ಮೃತ ಕೋಟೇಶನ ಸಹೋದರಿಯರಿಗೆ ಅಭಯ ನೀಡಿದರು.
ತಹಸೀಲ್ದಾರ ನಾಗರಾಜ ಕೆ, ಯೂಸುಫ್ ಇಟಗಿ, ಬಸವರಾಜ ನವಲಗುಂದ, ಸಂಜಯ ದೊಡ್ಡಮನಿ, ಗ್ರಾ.ಪಂ ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು, ಗ್ರಾಮದ ಮುಖಂಡರು ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.