ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನೂರಾರು ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಶಿಗ್ಲಿ ಗ್ರಾಮದ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿ ದೇವಾಲಯದ ನೂತನ ಕಟ್ಟಡ ನಿರ್ಮಾಣವಾಗಿದ್ದು, ದೇವಸ್ಥಾನ ಲೋಕಾರ್ಪಣೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮಗಳು ಮೇ .6ರಿಂದ 8ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶ್ರೀ ಗುರು ಕೊಟ್ಟೂರೇಶ್ವರ ವಿವಿಧೋದ್ದೇಶಗಳ ಸೇವಾ ಸಮಿತಿ ಅಧ್ಯಕ್ಷ ಮಹಾದೇವಪ್ಪ ಬೆಳವಿಗಿ ಹೇಳಿದರು.
ಅವರು ಸಮೀಪದ ಶಿಗ್ಲಿ ಗ್ರಾಮದ ಶ್ರೀ ಗುರು ಕೊಟ್ಟೂರೇಶ್ವರಸ್ವಾಮಿ ನೂತನ ದೇವಸ್ಥಾನ ಲೋಕಾರ್ಪಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಇಲ್ಲಿನ ಭಕ್ತರು ಸುಮಾರು 2-3 ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಪಾದಯಾತ್ರೆಯಿಂದ ಭಕ್ತರು ಸೇರಿ ಇಲ್ಲಿನ ಕೊಟ್ಟೂರುಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೊಂಡಿದ್ದು, ಸುಮಾರು 1.20 ಕೋಟಿ ರೂಗಳ ವೆಚ್ಚದಲ್ಲಿ ಭವ್ಯ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಸರಕಾರದ ಅನುದಾನವಿಲ್ಲದೆ ಭಕ್ತರು ನೀಡಿದ ದೇಣಿಗೆಯಿಂದಲೇ ದೇವಸ್ಥಾನ ನಿರ್ಮಾಣ ಮಾಡಲಾಗಿರುವದು ವಿಶೇಷವಾಗಿದೆ.
ಸಂಘಟಕರಾದ ರಾಜು ಓಲೇಕಾರ, ರಾಮಣ್ಣ ಲಮಾಣಿ (ಶಿಗ್ಲಿ) ಮಾತನಾಡಿ, ಮೇ. 6ರಿಂದ 8ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಧರ್ಮ ಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೇ. 6ರಂದು ಪುರಾಣ ಮಂಗಲ ಕಾರ್ಯಕ್ರಮ ನೆರವೇರಲಿದೆ. ಮೇ. 7ರಂದು ಜನಜಾಗೃತಿ ಸಮಾರಂಭ, 8ರಂದು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ, ನಂತರ ಮಧ್ಯಾಹ್ನ 11 ಗಂಟೆಗೆ ಧರ್ಮ ಸಭೆ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಅನೇಕ ಮಠಾಧೀಶರು, ಸಚಿವರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಮುಖಂಡರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಗ್ರಾಮದ ಎಲ್ಲ ಸಂಘ-ಸಂಸ್ಥೆಗಳು ಸಹಯೋಗ ನೀಡಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಗಪ್ಪ ತಂಬ್ರಳ್ಳಿ, ನಾಗರಾಜ ಬೆಳವಿಗಿ, ಮಂಜುನಾಥ ಗುಂಡಮಿ, ಶಿವಯೋಗಿ ಹಿರೇಮಠ, ಶಿವಯ್ಯ ಪೂಜಾರ, ಮಂಜುನಾಥ ಬೀಳಗಿ, ರಾಘವೇಂದ್ರ ಅಸುಂಡಿ, ಮಹಾಂತೇಶ ಅಸುಂಡಿ, ಕಲ್ಲಯ್ಯ ಪೂಜಾರ, ಶಿವಯ್ಯ ಪೂಜಾರ, ಭೀಮಸಿ ವಾಲಿಕಾರ, ಗಂಗಾಧರಯ್ಯ ರಿತ್ತಿಮಠ, ಶಿದ್ರರಾಮಸ್ವಾಮಿ ಪೂಜಾರ, ಸೋಮು ಗುಂಡಮಿ, ಆನಂದ ಹೊಸಳ್ಳಿ, ಬಸವರಾಜ ಬೆಳವಗಿ, ಬಸವರಾಜ ಹಂಗನಕಟ್ಟಿ, ಬಸವರಾಜ ಗುಡಗೇರಿ ಸೇರಿದಂತೆ ಅನೇಕರಿದ್ದರು.
ದೇವಸ್ಥಾನ ಲೋಕಾರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಕಾರ್ಯವನ್ನು ಅದ್ದೂರಿಯಾಗಿ ನೆರವೇರಿಸುವ ನಿಟ್ಟಿನಲ್ಲಿ ಇಲ್ಲಿನ ಯುವಕರ ಪಡೆ ಅವಿರತವಾಗಿ ಶ್ರಮಿಸುತ್ತಿದೆ. ಕಳೆದ ಮಾರ್ಚ್ 28ರಿಂದ ಇದೇ ಮೇ.6ರವರೆಗೆ ಹೂವಿನ ಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳ ಅಮೃತವಾಣಿಯಿಂದ ಶ್ರೀ ಗುರು ಕೊಟ್ಟೂರು ಬಸವೇಶ್ವರ ಸ್ವಾಮಿಯ ಪುರಾಣ ಪ್ರವಚನ ಸಂಜೆ 7ರಿಂದ ನಡೆಯುತ್ತಿದ್ದು, ನಿತ್ಯ ಸಾವಿರಾರು ಜನರು ಪ್ರವಚನಕ್ಕೆ ಸೇರುತ್ತಿದ್ದಾರೆ. ಎಲ್ಲ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಲು ಕಮಿಟಿಯವರು ನಿರ್ಧರಿಸಿದ್ದು, ಸುಮಾರು 10-15 ಸಾವಿರ ಜನರು ಸೇರುವ ನಿರೀಕ್ಷೆಯಿದೆ ಎಂದು ಮಹಾದೇವಪ್ಪ ಬೆಳವಿಗಿ ತಿಳಿಸಿದರು.