ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಾ ಕುರುಬರ ಸಂಘ ಸ್ಥಾಪನೆಯಾಗಿ 25 ವರ್ಷ ಪೂರೈಸಿದ ಪ್ರಯುಕ್ತ ಸಂಘದ ವತಿಯಿಂದ ಬರುವ ಜೂನ್ ತಿಂಗಳ ಮೊದಲನೇ ಅಥವಾ ಎರಡನೇ ವಾರದಲ್ಲಿ ಮುಖ್ಯಮಂತ್ರಿಗಳು ನೀಡುವ ದಿನಾಂಕವನ್ನಾಧರಿಸಿ ರಜತ ಮಹೋತ್ಸವ ಹಾಗೂ ರಾಜ್ಯಮಟ್ಟದ ಕನಕೋತ್ಸವ ಸಮಾರಂಭವನ್ನು ಆಯೋಜಿಸಲಾಗುತ್ತಿದೆ ಎಂದು ಕುರುಬ ಸಮಾಜದ ಹಿರಿಯರು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಹೇಳಿದರು.
ನಗರದ ಡಿ.ದೇವರಾಜ ಅರಸು ಹಾಸ್ಟೆಲ್ನಲ್ಲಿ ಮಂಗಳವಾರ ಕರೆದ ಕುರುಬರ ಸಂಘದ ಜಿಲ್ಲಾ ಮುಖಂಡರುಗಳ ಸಭೆಯಲ್ಲಿ ಅವರು ಮಾತನಾಡಿ, ಕುಲಗುರು, ದಾಸವರೇಣ್ಯ, ಭಕ್ತ ಕನಕದಾಸರ ಆಶೀರ್ವಾದದಿಂದ ರಜತ ಸಂಭ್ರಮದಲ್ಲಿ ಗದಗ ತಾಲೂಕಾ ಸಂಘವು ಅನೇಕ ಜನಪರ ಹಾಗೂ ಸಮಾಜಪರ ಕಾರ್ಯಗಳ ಮೂಲಕ ಸಮಾಜ ಬಾಂಧವರಿಗೆ ಸ್ಪಂದಿಸಿದೆ. ಗದಗ ತಾಲೂಕು ಕುರುಬರ ಸಂಘದ ರಜತ ಮಹೋತ್ಸವ ಹಾಗೂ ರಾಜ್ಯಮಟ್ಟದ ಕನಕೋತ್ಸವ ಕಾರ್ಯಕ್ರಮದ ಯಶಸ್ಸಿನಲ್ಲಿ ಸಮುದಾಯದ ಪ್ರತಿಯೊಬ್ಬರ ಸಹಭಾಗಿತ್ವ ಹಾಗೂ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ರಜತ ಮಹೋತ್ಸವ ಸ್ವಾಗತ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಹಿರಿಯ ಮುತ್ಸದ್ದಿಗಳು, ಮಾಜಿ ಶಾಸಕರುಗಳಾದ ಬಿ.ಆರ್. ಯಾವಗಲ್ಲ ಮತ್ತು ಡಿ.ಆರ್. ಪಾಟೀಲ, ಅಧ್ಯಕ್ಷರನ್ನಾಗಿ ರೋಣ ಮತಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲರನ್ನು, ಕಾರ್ಯಾಧ್ಯಕ್ಷರನ್ನಾಗಿ ಹಾಗೂ ಸಮಿತಿಯ ಸದಸ್ಯರುಗಳನ್ನಾಗಿ ಮಾಜಿ ಶಾಸಕರುಗಳಾದ ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ರಾಜ್ಯ ಸಂಘದ ನಿರ್ದೇಶಕರುಗಳಾದ ಚೆನ್ನಮ್ಮ ಹುಳಕಣ್ಣವರ, ಕಳಕನಗೌಡ ಗೌಡರ, ಪ್ರಹ್ಲಾದ ಹೊಸಳ್ಳಿ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರುಗಳಾದ ನಾಗಪ್ಪ ಗುಗ್ಗರಿ, ನೀಲಪ್ಪ ಗುಡದಣ್ಣವರ, ಬಸವರಾಜ ಜಗ್ಗಲ, ಮಂಜುನಾಥ ಮುಂಡವಾಡ, ಶರಣಪ್ಪ ದೊಣ್ಣೆಗುಡ್ಡ, ಶೇಖಣ್ಣ ಕಾಳೆ, ಹೊನ್ನೇಶ ಪೋಟಿ ಇವರುಗಳನ್ನು ನೇಮಿಸಿ ವಿವಿಧ ಸಮಿತಿಗಳನ್ನು ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಮಿಥುನ ಪಾಟೀಲ, ಸ್ಲಂ ಬೋರ್ಡ್ ರಾಜ್ಯ ನಿರ್ದೇಶಕರಾದ ರಾಮಕೃಷ್ಣ ರೊಳ್ಳಿ, ಕೆ.ಬಿ. ಕಂಬಳಿ, ತಾಲೂಕಾಧ್ಯಕ್ಷ ನಾಗಪ್ಪ ಗುಗ್ಗರಿ, ಶರಣಪ್ಪ ಬೆಟಗೇರಿ, ಎಸ್.ಎಸ್. ಕರಡಿ, ಬಾವಿಕಟ್ಟಿ, ವೈ.ಬಿ. ಬಾಣಾಪೂರ, ನೀಲಕಂಠ ಮರಡಿ, ಬಿ.ಎಚ್. ಹ್ಯಾಟಿ, ಜಿ.ವಿ. ಹಾವಣಗಿ, ವೈ.ಡಿ. ಜಡದಲಿ, ಶಿವಣ್ಣ ಸಿಂಗಟಾಲಕೇರಿ, ಮಂಜುನಾಥ ಜಡಿ, ರವಿ ಹುಡೇದ ಹಾಗೂ ಡಿ. ದೇವರಾಜ ಅರಸು ಹಾಸ್ಟೇಲ್ನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸಂಘದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಮಾತನಾಡಿ, ಈ ರಜತ ಮಹೋತ್ಸವದ ಸವಿನೆನಪಿನಗಾಗಿ ಸ್ಮರಣ ಸಂಚಿಕೆ ಹೊರತರಲಾಗುತ್ತಿದೆ. ಸ್ಮರಣ ಸಂಚಿಕೆಯಲ್ಲಿ ಸಂಘ ನಡೆದು ಬಂದ ಇತಿಹಾಸ, ಸಮಾಜದ ಧಾರ್ಮಿಕ ಪುರುಷರ ಲೇಖನಗಳನ್ನೊಳಗೊಂಡು ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಸಂಘದ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳನ್ನು ತಿಳಿಸುವ ಆಶಯ ಸ್ಮರಣ ಸಂಚಿಕೆಯದ್ದಾಗಿದೆ. ಈ ಸಮಾರಂಭವನ್ನು 2 ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದು, ಕನಕದಾಸರ ಕುರಿತು ವಿಚಾರ ಗೋಷ್ಠಿಗಳು, ಸಮಾಜ ನೌಕರ ಬಾಂಧವರ ಸಮಾವೇಶ, ಮಹಿಳಾ ಗೋಷ್ಠಿ, ಕನಕದಾಸರ ಕೀರ್ತನೆ, ಗಾಯನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.