ಬೆಂಗಳೂರು: ಮಾಧ್ಯಮ, ಪತ್ರಿಕೆಗಳನ್ನು ನೋಡಿ ನಾನು ಏನು ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ. ಸಿಬಿಐ ಕೋರ್ಟ್ನಿಂದ ಶಿಕ್ಷೆಗೆ ಗುರಿಯಾಗಿರುವ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡುವ ವಿಚಾರಕ್ಕೆ ವಿಧಾನಸೌಧದಲ್ಲಿ ಮಾತನಾಡಿದ ಅವರು,
ಜನಾರ್ದನ ರೆಡ್ಡಿಗೆ ಶಿಕ್ಷೆ ಆಗಿರುವ ವಿಚಾರ ಮಾಧ್ಯಮ, ಪತ್ರಿಕೆಗಳ ಮೂಲಕ ನನಗೆ ಗೊತ್ತಾಗಿದೆ. ಮಾಧ್ಯಮ, ಪತ್ರಿಕೆಗಳನ್ನು ನೋಡಿ ನಾನು ಏನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಕೋರ್ಟ್ನಿಂದ ಆದೇಶ ಬರಲಿ. ಆದೇಶ ಬಂದ ಬಳಿಕ ಕಾನೂನು ಪ್ರಕಾರ,
ಸಂವಿಧಾನದ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು. ಇದೇ ವೇಳೆ 18 ಶಾಸಕರ ಅಮಾನತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರು ನನಗೆ ಪತ್ರ ಬರೆದಿದ್ದರು. ನಾನು ಊರಿನಲ್ಲಿ ಇರಲಿಲ್ಲ. ರಾಜ್ಯಪಾಲರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಆದಷ್ಟು ಬೇಗ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚೆ ಮಾಡುತ್ತೀನಿ ಎಂದು ತಿಳಿಸಿದರು.