ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪ್ರತಿವರ್ಷ ಆಗಿಹುಣ್ಣಿಮೆ ದಿನ ಅಂದರೆ ಈ ವರ್ಷ ಮೇ 12ರಿಂದ 2 ದಿನಗಳ ಕಾಲ ನಡೆಯುವ ಶಿರಹಟ್ಟಿಯ ಶ್ರೀ ಫಕ್ಕೀರೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಶಿರಹಟ್ಟಿ ಸಂಸ್ಥಾನ ಮಠದ ಶ್ರೀ ಫಕೀರ ಸಿದ್ಧರಾಮ ಜಗದ್ಗುರುಗಳು ಲಕ್ಷ್ಮೇಶ್ವರದ ಸೋಮೇಶ್ವರ ದೇವಸ್ಥಾನ, ದೂದಪೀರಾ ದರ್ಗಾಗಳಿಗೆ ಭೇಟಿ ನೀಡಿದರು. ಬಳಿಕ ಭಕ್ತರ ಮನೆಗೆ ಆಗಮಿಸಿ ಆಶೀರ್ವದಿಸಿ, ಭಕ್ತರಿಂದ ಕಾಣಿಕೆ ಪಡೆಯುವ ವರ್ಷಾಸನೆ ಸ್ವೀಕರಿಸುವ ಸಂಪ್ರದಾಯ ನೆರವೇರಿಸಿದರು.
ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕೇಂದ್ರವಾಗಿರುವ ಶಿರಹಟ್ಟಿ ಫಕೀರೇಶ್ವರ ಮಠದಿಂದ ಜಾತ್ರಾ ಮುನ್ನಾದಿನ ಪಟ್ಟಣಕ್ಕೆ ವರ್ಷಾಸನೆಗೆ ಬರುವ ಸಾಂಪ್ರಯದಂತೆ ಶ್ರೀ ಫಕೀರ ಸಿದ್ಧರಾಮ ಜಗದ್ಗುರುಗಳು ಆನೆ, ಛತ್ರ, ಚಾಮರ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಭಕ್ತರ ಮನೆಗಳಿಗೆ ಭೇಟಿ ನೀಡಿ, ಕಾಣಿಕೆ, ಧವಸ-ಧಾನ್ಯಗಳನ್ನು ಸ್ವೀಕರಿಸಿ ಆಶೀರ್ವದಿಸಿ ಶ್ರೀಮಠದ ಜಾತ್ರೆಗೆ ಬರುವಂತೆ ಕೋರಿದರು.
ಈ ವೇಳೆ ಶುಭ ನುಡಿದ ಜ.ಫಕೀರ ಸಿದ್ಧರಾಮ ಮಹಾಸ್ವಾಮಿಗಳು, ಜಾತ್ರಾ ಮುನ್ನಾ ದಿನ ಪಟ್ಟಣದಲ್ಲಿ ವರ್ಷಾಸನೆ ಮಾಡುವುದು ಸಂಪ್ರದಾಯ ಮತ್ತು ಭಾವೈಕ್ಯತೆ ಸಂಕೇತದ ಮೆರವಣಿಗೆಯಾಗಿದೆ. ಈ ವರ್ಷ ಜಗತ್ತಿಗೆ ಸುಖ, ಶಾಂತಿ, ನೆಮ್ಮದಿ ದೊರಕಲಿ. ಸಮೃದ್ಧ ಮಳೆ ಬೆಳೆಯಾಗಿ ರೈತರು ಸೇರಿ ಸಕಲ ಜೀವರಾಶಿಗಳು ಸಂತೃಪ್ತ ಜೀವನ ಸಾಗಿಸಲಿ. ದ್ವೇಷ-ಅಸೂಯೆ ಅಳಿದು ಪ್ರೀತಿ-ಸ್ನೇಹ ಸಂವರ್ಧಿಸಲಿ ಎನ್ನುವ ಭಿನ್ನಹವನ್ನು ದೇವರಲ್ಲಿ ಸಮರ್ಪಿಸಿ ಜಾತ್ರೆ ನೆರವೇರಿಸೋಣ. ಈ ನಿಟ್ಟಿನಲ್ಲಿ ಮೇ 12ರಿಂದ ಜರುಗುವ ಶ್ರೀಮಠದ ಜಾತ್ರೆಯಲ್ಲಿ ಎಲ್ಲರೂ ಪಾಲ್ಗೊಂಡು ಫಕ್ಕೀರೇಶ್ವರರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ಈ ವೇಳೆ ಸೋಮೇಶ್ವರ ಭಕ್ತರ ಟ್ರಸ್ಟ್ ಅಧ್ಯಕ್ಷ ಗುರಣ್ಣ ಪಾಟೀಲಕುಲಕರ್ಣಿ, ಭಕ್ತರಾದ ಶಾಮಣ್ಣ ಗಾಂಜಿ, ಮಲ್ಲಿಕಾರ್ಜುನ ಮಹಾಂತಶೆಟ್ಟರ, ಗಂಗಾಧರಯ್ಯ ಫಕ್ಕೀರಸ್ವಾಮಿಮಠ, ಎಂ.ಕೆ. ಕಳ್ಳಿಮಠ, ಗಂಗಾಧರಯ್ಯ ಫಕ್ಕೀರಸ್ವಾಮಿಮಠ, ಜಗದೀಶ ಪಿಳ್ಳಿ, ಚಂಬಣ್ಣ ಬಾಳಿಕಾಯಿ, ಸುರೇಶ ರಾಚನಾಯ್ಕರ, ವಿರೂಪಾಕ್ಷ ಆದಿ, ಮಯೂರಗೌಡ ಪಾಟೀಲ, ಎಂ.ಆರ್. ಬೆಳವಟಗಿ, ಶಿವಯೋಗಿ ಅಂಕಲಕೋಟಿ, ಎಂ.ಎಸ್. ಚಾಕಲಬ್ಬಿ, ರಾಘವೇಂದ್ರ ಪೂಜಾರ, ಜಗದೀಶ ಲಿಂಗಶೆಟ್ಟಿ, ಜಿ.ಎಸ್. ಗುಡಗೇರಿ, ಶಿವಾನಂದ ದೊಡ್ಡಮನಿ, ವೆಂಕಟೇಶ ಮಾತಾಡೆ, ಅಂಜುಮನ್ ಹಾಗೂ ದರ್ಗಾ ಕಮಿಟಿಯ ಮುಖಂಡರು ಸೇರಿ ಅಪಾರ ಭಕ್ತರು ಪಾಲ್ಗೊಂಡಿದ್ದರು.
ಪಟ್ಟಣದ ಶ್ರೀ ಫಕ್ಕೀರೇಶ್ವರ ಮಠದಿಂದ ಶ್ರೀ ಸೋಮೇಶ್ವರ ದೇವಸ್ಥಾನ, ದೂದಪೀರಾಂ ದರ್ಗಾಕ್ಕೆ ಶ್ರೀಗಳು ಭೇಟಿ ನೀಡಿದರು. ಪ್ರಮುಖ ಮಾರ್ಗದಲ್ಲಿ ಮೆರವಣಿಗೆ ಮೂಲಕ ಸಾಗಿದರು. ಈ ವೇಳೆ ಭಕ್ತರು ಕಾಣಿಕೆ, ದವಸ ಧಾನ್ಯಗಳನ್ನು ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡು ಜಗದ್ಗುರುಗಳಿಗೆ ಜಯಘೋಷಗಳನ್ನು ಕೂಗಿದರು.