ಬೆಳಗಾವಿ: ಬೇರೆಯವರ ಮಾತು ಕೇಳಿ ಪಾಕಿಸ್ತಾನದ ಜೊತೆ ನಡೆಸುತ್ತಿದ್ದ ಸಂಘರ್ಷ ಕೈ ಬಿಟ್ಟಿದ್ದು ತಪ್ಪು ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಈ ಸಂಘರ್ಷದಲ್ಲಿ ಪಾಕಿಸ್ತಾನವನ್ನು ನಾಶ ಮಾಡಬೇಕಿತ್ತು. ಕದನ ವಿರಾಮದ ನಂತರ ಮತ್ತೆ ದಾಳಿ ಮಾಡಿದ್ದಾರೆ.
ಬೇರೆಯವರ ಮಾತು ಕೇಳಿ ಪಾಕಿಸ್ತಾನದ ಜೊತೆ ನಡೆಸುತ್ತಿದ್ದ ಸಂಘರ್ಷ ಕೈ ಬಿಟ್ಟಿದ್ದು ತಪ್ಪು. ಪಾಕಿಸ್ತಾನದವರು ಸಾಯುವವರೆಗೂ ವೈರಿಗಳೇ. ಅವರು ಎಂದಿಗೂ ನಮಗೆ ಒಳ್ಳೆಯದು ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಕ್ ಹಾಗೂ ಭಾರತದ ನಡುವೆ ಸಂಧಾನದಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಅವರು ಯಾರು? ಅಮೆರಿಕದ ವಿಚಾರದಲ್ಲಿ ನಾವು ಏನಾದರೂ ಹೇಳಿದರೆ ಅವರು ಕೇಳುತ್ತಾರಾ? ಮೋದಿಯವರು ಕಠಿಣ ಹಾಗೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು.
ಈ ವಿಚಾರದಲ್ಲಿ ಟ್ರಂಪ್ ಮಾತು ಕೇಳಿದ್ದು ತಪ್ಪು. ಭಯೋತ್ಪಾದಕರ ವಿಚಾರದಲ್ಲಿ ಎಲ್ಲಾ ದೇಶಗಳು ಶೃಂಗಸಭೆಯನ್ನ ನಡೆಸಿ ಭಯೋತ್ಪಾದಕರನ್ನು ನಾಶ ಮಾಡಬೇಕು ಎಂದು ಒತ್ತಾಯಿಸಿದರು.