ಶಿಕ್ಷಣಕ್ಕೂ ನೆರವಾದ ನರೇಗಾ

0
Spread the love

ವಿಜಯಸಾಕ್ಷಿ ಸುದ್ದಿ, ಮುಂಡರಗಿ: ಉದ್ಯೋಗಕ್ಕೆ ಶಿಕ್ಷಣ ಮಟ್ಟದ ಕಡಿವಾಣವೇನಿಲ್ಲ. ಇವರಿಗೆ ಸಣ್ಣ ಕೆಲಸ ಅಥವಾ ದೊಡ್ಡ ಕೆಲಸವೆಂಬ ಹಮು-ಬಿಮ್ಮು ಕೂಡ ಇಲ್ಲ. ಆದರೆ ಕಾಲೇಜುಗಳಲ್ಲಿ ಪದವಿ ಮುಗಿಸಿ ಮತ್ತು ಓದುತ್ತಲೇ ನರೇಗಾ ಯೋಜನೆಯ ಸಮುದಾಯ ಕಾಮಗಾರಿಯಲ್ಲಿ ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ವೆಂಕಟಾಪೂರ ಗ್ರಾಮದ ಮೂವರು ವಿದ್ಯಾರ್ಥಿನಿಯರು ತೊಡಗಿಕೊಂಡಿದ್ದಾರೆ. ಆ ಮೂಲಕ 370 ರೂಪಾಯಿ ಕೂಲಿ ಮೊತ್ತದಿಂದ ಈ ವಿದ್ಯಾರ್ಥಿಗಳು ಗುದ್ದಲಿ, ಸಲಾಕೆ ಹಿಡಿದು ತಮ್ಮ ಮುಂದಿನ ವಿದ್ಯಾಭ್ಯಾಸದ ಜೊತೆಗೆ ಸಹೋದರರ ಓದಿಗೂ ನೆರವಾಗಿದ್ದಾರೆ.

Advertisement

ಕಳೆದ ವರ್ಷ ನರೇಗಾ ಯೋಜನೆಯಡಿ ದುಡಿದು ಬಂದ ಹಣದಿಂದ ಪದವಿ ಮುಗಿಸಿದ ವಿಜಯಲಕ್ಷ್ಮೀ ಶಿವಸಿಂಪಿಗೇರ ನರೇಗಾ ಸಮುದಾಯ ಕಾಮಗಾರಿಗಳಲ್ಲಿ ನಾಲ್ವರು ಕುಟುಂಬ ಸದಸ್ಯರೊಂದಿಗೆ ತೊಡಗಿಕೊಂಡು ಕುಟುಂಬದ ನಿರ್ವಹಣೆಗೂ ನೆರವಾಗಿದ್ದಾಳೆ. ಸಹೋದರ ಬಿ.ಎ ಎರಡನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದು, ಆತನ ಕಾಲೇಜು ಶುಲ್ಕ ಕಟ್ಟಲು ಸಹ ನರೇಗಾ ನೆರವಾಗಿದೆ ಎನ್ನುತ್ತಾರೆ ವಿಜಯಲಕ್ಷ್ಮೀ.

ವೆಂಕಟಾಪೂರದ 20 ವರ್ಷದ ವಿದ್ಯಾರ್ಥಿನಿ ಚಂದ್ರಿಕಾ ಬಸವರಾಜ ಕಟಗೇರಿ ಸಹ ಗದುಗಿನ ಖಾಸಗಿ ಕಾಲೇಜಿನಲ್ಲಿ ಬಿ.ಎ ಎರಡನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾಳೆ. ರಜಾ ದಿನಗಳಲ್ಲಿ ನರೇಗಾ ಸಮುದಾಯ ಕಾಮಗಾರಿಯಲ್ಲಿ ಕೂಲಿಕಾರಳಾಗಿ ದುಡಿದು ಬಂದ ಕೂಲಿ ಮೊತ್ತದಿಂದ ತನ್ನ ಕಾಲೇಜು ವ್ಯಾಸಂಗದ ಬಸ್ ಪಾಸ್, ಶುಲ್ಕ ಪಾವತಿ ಖರ್ಚಿನ ಜೊತೆಗೆ ಹೈಸ್ಕೂಲು, ಪ್ರಾಥಮಿಕ ಶಾಲೆಗಳಲ್ಲಿ ಕಲಿಯುತ್ತಿರುವ ತಮ್ಮಂದಿರ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿದ್ದಾಳೆ. ತಂದೆಗೆ ಅನಾರೋಗ್ಯವಾದಾಗ ಮನೆಮಂದಿಯೆಲ್ಲ ನರೇಗಾ ಯೋಜನೆಯಡಿ ದುಡಿದು ಬಂದ ಹಣದಿಂದಲೇ ವೈದ್ಯಕೀಯ ಖರ್ಚನ್ನು ಸಹ ನಿಭಾಯಿಸಿದ್ದೇವೆ ಎನ್ನುತ್ತಾಳೆ.

ವೆಂಕಟಾಪೂರ ಗ್ರಾಮದ ಮತ್ತೊಬ್ಬ ಕೂಲಿಕಾರ ಮಹಿಳೆ ಶೋಭಾ ಗೋಣಿಸ್ವಾಮಿ ಸಹ ಪದವಿ ಮುಗಿಸಿದ್ದು, ನರೇಗಾ ಕೂಲಿ ಮೊತ್ತ ಬಹು ಉಪಯೋಗಕಾರಿಯಾಗಿದೆ ಎನ್ನುತ್ತಾರೆ. ಕೃಷಿ ಕುಟುಂಬದ ನಾನು ಈಗಾಗಲೇ ಪದವಿ ಮುಗಿಸಿದ್ದು, ಕೆಲಸದ ಹುಡುಕಾಟದಲ್ಲಿದ್ದೇನೆ. ನರೇಗಾ ಸಮುದಾಯ ಕಾಮಗಾರಿಯಲ್ಲಿ ತೊಡಗಿಕೊಳ್ಳುವುದರಿಂದ ಬಂದ ಕೂಲಿ ಹಣ ಸಂದರ್ಶನಗಳಿಗೆ ಹಾಜರಾಗಲು ಬಹಳ ಸಹಕಾರಿಯಾಗಿದ್ದು, ಕುಟುಂಬ ನಿರ್ವಹಣೆಗೆ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.

ನರೇಗಾ ಕೂಲಿಮೊತ್ತ 370 ರೂಪಾಯಿಗಳಿಗೆ ಹೆಚ್ಚಳವಾಗಿರುವುದು ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ. ಆ ಮೂಲಕ ಪದವಿ ಶಿಕ್ಷಣಕ್ಕೆ ಹಣ ಹೊಂದಿಸಲು ಪರಿತಪಿಸುತ್ತಿದ್ದ ಬಡಕುಟುಂಬದ ವಿದ್ಯಾರ್ಥಿಗಳಿಗೆ ನರೇಗಾ ಯೋಜನೆ ಕೈಹಿಡಿದಿದೆ. ಶುಲ್ಕ ಕಟ್ಟಲು ಹಾಗೂ ಕಲಿಕೆಯ ನಂತರ ಕೆಲಸ ಹುಡುಕಲು ಉದ್ಯೋಗಖಾತ್ರಿ ಯೋಜನೆ ನೆರವಾಗಿದ್ದು, ತಮ್ಮ ಶಿಕ್ಷಣದ ಜೊತೆಗೆ ಸಹೋದರ ಸಹೋದರಿಯರ ವ್ಯಾಸಂಗ ಮುಂದುವರೆಸಲು ಅವರಿಗೆ ಭರವಸೆ ಮೂಡಿಸಿದೆ.

“ಮುಂಡರಗಿ ತಾಲೂಕಿನ ಗ್ರಾ.ಪಂಗಳಲ್ಲಿ ಐಇಸಿ ಚಟುವಟಿಕೆ ಮೂಲಕ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಲಾಗಿದ್ದು, ನರೇಗಾ ಯೋಜನೆ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗುತ್ತಿದೆ. ತಾಲೂಕಿನಲ್ಲಿ ವಿಶೇಷಚೇತನರಿಗೆ ಆರ್ಥಿಕ ಗುಣಮಟ್ಟ ಸುಧಾರಿಸಲು ಹಾಗೂ ಪದವಿ ವಿದ್ಯಾರ್ಥಿನಿಯರ ಜೊತೆಗೆ ಅವರ ಸಹೋದರ/ರಿಯರಿಗೂ ನರೇಗಾ ಕೂಲಿಮೊತ್ತ ಶೈಕ್ಷಣಿಕ ವೆಚ್ಚಕ್ಕೆ ಕಾರಣವಾಗಿರುವುದು ಖುಷಿಯ ಸಂಗತಿ”

– ವಿಶ್ವನಾಥ ಹೊಸಮನಿ.

ತಾ.ಪಂ ಇಓ, ಮುಂಡರಗಿ.


Spread the love

LEAVE A REPLY

Please enter your comment!
Please enter your name here