ವಿಜಯಸಾಕ್ಷಿ ಸುದ್ದಿ, ಧಾರವಾಡ: ಕೃಷಿ ಶಿಕ್ಷಣವನ್ನು ತರಗತಿ ಕೋಣೆಯ ಹೊರಗೆ ನೀಡಬೆಕು. ಕೃಷಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ರೈತರ ಬೇಡಿಕೆ ಮತ್ತು ಸವಾಲುಗಳನ್ನು ತಿಳಿದು, ಅವರೊಂದಿಗೆ ಬೆರೆತು ಗ್ರಾಮೀಣರ ಜೀವನಮಟ್ಟ ಸುಧಾರಣೆಗೆ ಕೆಲಸ ಮಾಡಬೇಕು ಎಂದು ನವದೆಹಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಕುಲಪತಿಗಳಾದ ಡಾ. ಚಿ. ಶ್ರೀನಿವಾಸ ರಾವ್ ಹೇಳಿದರು.
ಅವರು ಬುಧವಾರ ಬೆಳಿಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿದ ವಿಶ್ವವಿದ್ಯಾಲಯ 38ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಕರ್ನಾಟಕ ಕೃಷಿ ಕ್ಷೇತ್ರಕ್ಕೆ ಹವಾಮಾನ ವೈಪರಿತ್ಯ, ತಂತ್ರಜ್ಞಾನ ಮತ್ತು ನೀತಿಗಳು ಸವಾಲುಗಳಾಗಿವೆ. ಕರ್ನಾಟಕ ರಾಜ್ಯವು ಸರಿ ಸುಮಾರು 128 ಲಕ್ಷ ಹೆಕ್ಟೆರ್ ಕೃಷಿ ಭೂಮಿ ಹೊಂದಿದೆ. ಇದರಲ್ಲಿ ಸುಮಾರು 40 ಲಕ್ಷ ಹೆಕ್ಟೆರ್ ಭೂಮಿ ನೀರಾವರಿ, ಬಹು ಬೆಳೆ ಬೆಳೆಯುವ ಸುಮಾರು 21 ಲಕ್ಷ ಹೆಕ್ಟೆರ್ ಭೂಮಿ ಮುಖ್ಯವಾಗಿದೆ.
ಕರ್ನಾಟಕ ಸರಕಾರವು 2025-26ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಕೃಷಿ ಬೆಳವಣಿಗೆ ಕರ್ನಾಟಕದಲ್ಲಿ ಹೆಚ್ಚಾಗಿದೆ.ಭಾರತದ ಕೃಷಿ ಹಸಿರುಕ್ರಾಂತಿ, ಶ್ವೇತಕ್ರಾಂತಿ ಮತ್ತು ಮ್ಯತ್ಸಕ್ರಾಂತಿಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ. ಈ ಕ್ರಾಂತಿಗಳಿಂದಾಗಿ ಆರ್ಥಿಕ, ಸಾಮಾಜಿಕ, ಜೌದ್ಯೋಗಿಕ ಮತ್ತು ಸಾಮಾಜಿಕ ಬದಲಾವಣೆಗಳಾಗಿವೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಮಾತನಾಡಿ, ಹವಾಮಾನದ ಬದಲಾವಣೆಯಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಹಿನ್ನಡೆ, ಹಾನಿ ಆಗುತ್ತಿದೆ. ಕೃಷಿ ಪದವಿಧರರು ಹೆಚ್ಚಿನ ಸಂಶೋಧನೆ ಹಾಗೂ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಕೃಷಿ ಕಾರ್ಯಕ್ಕೆ ಬಲ ತುಂಬಬೇಕು ಎಂದು ತಿಳಿಸಿದರು.
ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅತ್ಯುತ್ತಮ ಸಂಸ್ಥೆಯಾಗಿದೆ. ರೈತರ ಅವಶ್ಯಕತೆಗಳಿಗೆ ಅನುಗುಣವಾಗಿ ಸಂಶೋಧನೆ, ಕೃಷಿ ತಂತ್ರಜ್ಞಾನದ ವರ್ಗಾವಣೆ, ಹೊಸ ತಳಿಗಳ ಪರಿಚಯಿಸುವಲ್ಲಿ ಈ ವಿಶ್ವವಿದ್ಯಾಲಯದ ಪಾತ್ರ ಮತ್ತು ಕೊಡುಗೆ ಅಪಾರ ಎಂದು ತಿಳಿಸಿದರು.
ಸಮಾರಂಭದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಮುತ್ತಣ್ಣ ಭೀರಪ್ಪ ಪೂಜಾರ, ದ್ಯಾಮನಗೌಡ ತಿಮ್ಮನಗೌಡ ಪಾಟೀಲ ಮತ್ತು ಶಂಕರ ಹನಮಂತ ಲಂಗಟಿ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದರು. ಕೃಷಿ ಪದವಿ ವಿದ್ಯಾರ್ಥಿಗಳಾದ ಕಾರ್ತಿಕ ಚಿಗರಿ ಹಾಗೂ ಐಶ್ವರ್ಯ ಬೆಟಗೇರಿ ಹೆಚ್ಚು ಚಿನ್ನದ ಪದಕಗಳೊಂದಿಗೆ ಪ್ರಸಕ್ತ ಸಾಲಿಗೆ ಕೃಷಿ ವಿಶ್ವವಿದ್ಯಾಲಯದ ಚಿನ್ನದ ಹುಡುಗ ಮತ್ತು ಚಿನ್ನದ ಹುಡಗಿ ಬಿರುದಿಗೆ ಭಾಜನರಾದರು.