ಬೆಂಗಳೂರು: ನಕಲಿ ಬಾಬಾಗಳ ಹಾವಳಿ ದೇಶದ ಎಲ್ಲೆಡೆಯೂ ಇದೆ. ಅಮಾಯಕರನ್ನು ಬಲೆಗೆ ಬೀಳಿಸಿಕೊಂಡು ಎಂಥಹ ಕಾಯಿಲೆಯನ್ನಾದರೂ ಗುಣಪಡಿಸುತ್ತೇನೆ ಎಂದು ಹೇಳಿಕೊಂಡು ಹಣ ವಸೂಲಿ ಮಾಡುವುದು ಸಾಮಾನ್ಯವಾಗಿದೆ. ಇದೀಗ ಅಂತಹದ್ದೆ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಾತಕ ದೋಷಕ್ಕೆ ಪೂಜೆಯ ಹೆಸರಿನಲ್ಲಿ ಮಹಿಳಾ ಕಾನ್ಸ್ಟೇಬಲ್ ಹಾಗೂ ಅವರ ಸ್ನೇಹಿತೆಯಿಂದ 5ಲಕ್ಷ ರೂ. ಪಡೆದು ವಂಚಿಸಿದ ಆರೋಪಿಯನ್ನು ನಗರದ ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೌದು ಆಡುಗೋಡಿಯ ಪೊಲೀಸ್ ಕ್ವಾಟ್ರಸ್ನಲ್ಲಿದ್ದ ಮಹಿಳಾ ಕಾನ್ಸ್ಟೇಬಲ್ ಅನಾರೋಗ್ಯಕ್ಕೆ ಒಳಗಾದಾಗ ಸ್ನೇಹಿತರ ಮೂಲಕ ಕಲಬುರಗಿಯ ಜ್ಯೋತಿಷಿ ಹೇಮಂತ್ ಭಟ್ ಪರಿಚಯವಾಗಿತ್ತು. ಇದಕ್ಕೂ
ಮುನ್ನ ಇಬ್ಬರು ಸ್ನೇಹಿತೆಯರು ಜ್ಯೋತಿಷಿ ಮಾತು ನಂಬಿ ಹೋದಾಗ, ಅವರಿಗೂ ಪೂಜೆ ಮಾಡಿದ್ದ. ನಿನ್ನ ಜಾತಕದಲ್ಲಿ ತುಂಬಾ ದೋಷವಿದೆ, ಪೂಜೆ ಮಾಡಿಸಲೇಬೇಕು. ಇದರಿಂದ ನಿನ್ನ ಆರೋಗ್ಯ ಸರಿ ಮಾಡುತ್ತೇನೆ. ಭಯಬೇಡ ಈ ವಿಚಾರದಲ್ಲಿ ನಾನು ಡಾಕ್ಟರ್. ಜೊತೆಗೆ ನಿನಗೆ ಮದುವೆಯೂ ಆಗುವಂತೆ ಮಾಡುತ್ತೇನೆ ಎಂದು ಹೇಳಿದ್ದನು.
ಕೋರಮಂಗಲದಲ್ಲಿ ಲಾಡ್ಜ್ಗೆ ಕರೆಸಿ ಪೂಜೆ ಹಾಕಿ ಹಂತ ಹಂತವಾಗಿ 5 ಲಕ್ಷ ರೂ. ಪಡೆದು ವಂಚನೆ ಮಾಡಿದ್ದ. ಈ ಕುರಿತು ನೊಂದ ಮಹಿಳಾ ಕಾನ್ಸ್ಟೇಬಲ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಜ್ಯೋತಿಷ್ಯ ನೆಪದಲ್ಲಿ ಆತ್ಮಗಳ ಕಥೆ ಕಟ್ಟಿ ವಶೀಕರಣ ಮಾಡಿರುವುದಾಗಿ ಆರೋಪಿಸಿದ್ದರು. ಸದ್ಯ ಆಡುಗೋಡಿ ಪೊಲೀಸರು ಡೋಂಗಿ ಜ್ಯೋತಿಷಿಯನ್ನು ಬಂಧಿಸಿದ್ದಾರೆ.